ಕಾರವಾರ:
ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಹೆಮ್ಮೆ ನಮ್ಮದಾಗುತ್ತದೆ ಎಂದು ಪ್ರೊಬೇಶನರಿ ಐಎಎಸ್ ಅಧಿಕಾರಿ ಡಾ.ಕೆ.ಆನಂದ್ ಹೇಳಿದರು.
ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ರೆಡಕ್ರಾಸ್ ಸಂಸ್ಥೆ ಉತ್ತರಕನ್ನಡ ಜಿಲ್ಲಾ ಘಟಕ ಮತ್ತು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ರೆಡಕ್ರಾಸ್ ಯೂತ್ವಿಂಗ್ನ ಸಂಯುಕ್ತ ಆಶ್ರಯದಲ್ಲಿ ನಡೆದ ಜಿನೇವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕಲ್ಪನಾ ಕೆರವಡಿಕರ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನವೇ ಶ್ರೇಷ್ಠವಾದದ್ದು. ಯುವಕ-ಯುವತಿಯರಲ್ಲಿ ರಕ್ತದಾನದ ಮಹತ್ವ ತಿಳಿಸುವ ಇಂತಹ ಕಾರ್ಯಕ್ರಮ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಶಂಕರ ರಾವ್ ರಕ್ತದಾನದ ಮºತ್ವವನ್ನು ಮತ್ತು ವಿವಿಧ ರಕ್ತಗುಂಪುಗಳ ಕುರಿತು ಮಾಹಿತಿ ನೀಡಿದರು. ಭಾರತೀಯ ರೆಡಕ್ರಾಸ್ ಘಟಕದ ಸದಸ್ಯ ಸದಾನಂದ ನಾಯ್ಕ, ಮುರಳಿಧರ್ ಗೋವೆಕರ್, ಖೈರುನ್ನಿಸಾಬೇಗಂ ಭಾಗವಹಿಸಿದ್ದರು. ಸಭೆಯ ಬಳಿಕ ಕಾಲೇಜಿನ 150 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪಿನ ವರ್ಗೀಕರಣ ಮಾಡಿಸಿಕೊಂಡರು. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ವರ್ಗೀಕರಣ ಕಾರ್ಯವನ್ನು ನಡೆಸಿಕೊಟ್ಟರು. ಕೆಲವರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಯೂನಿಯನ್ ಕಾರ್ಯಧ್ಯಕ್ಷ ಡಾ. ಯು. ಎನ್. ಶೆಟ್ಟಿ ಮತ್ತು ರೆಡಕ್ರಾಸ್ ಯೂತ್ವಿಂಗ್ ಸಂಯೋಜಕ ಡಾ. ಪ್ರೀತಿ ತಲ್ಲೂರ್ ಹಾಗೂ ಪ್ರೊಫೆಸರ್ ಶಿವಾನಂದ ಭಟ್ ಉಪಸ್ಥಿತರಿದ್ದರು. ಉ.ಕ. ಜಿಲ್ಲಾ ರೆಡ್ಕ್ರಾಸ್ ಘಟಕದ ಚೇರಮನ್ ವಿ.ಎಂ. ಹೆಗಡೆ ಪ್ರಸ್ಥಾಪಿಸಿದರು. ಪ್ರೊಫೆಸರ್ ವೆಂಕಟೇಶ್ ಗಿರಿ ನಿರ್ವಹಿಸಿದರು. ಭಾರತೀಯ ರೆಡಕ್ರಾಸ್ ಸಂಸ್ಥೆಯ ಕಾರವಾರ ಘಟಕದ ಕಾರ್ಯದರ್ಶಿ ಜಗದೀಶ್ ಬಿರ್ಕೋಡಿಕರ್ ವಂದಿಸಿದರು.
Leave a Comment