ಕಾರವಾರ:
ಸರ್ವಸಮಾನತೆ ಬಯಸಿದ ಡಾ. ಎಂ.ಎಂ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿ ನಾಪತ್ತೆಯಾದ ಹಂತಕರನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ಅನುರಿಸುತ್ತಿರುವುದು ವಿದ್ವತ್ ವಲಯಕ್ಕೆ ಆಘಾತಕಾರಿ ಎಂದು ಡಾ. ಕಲಬುರ್ಗಿ ಅವರ ವಿದ್ಯಾರ್ಥಿ ಪ್ರೊ. ಶ್ರೀಧರ ನಾಯಕ ಹತ್ಯೆಯನ್ನು ಖಂಡಿಸಿದರು.
ನಾಡೋಜ ಡಾ. ಎಂ.ಎಂ. ಕಲ್ಬುರ್ಗಿ ಅವರ ನೆನಪಿನ ಅಂಗವಾಗಿ ನಗರದಲ್ಲಿ ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ, ಸಿಐಟಿಯು, ಎಸ್.ಎಫ್.ಐ ಮತ್ತು ಸಮಾನ ಮನಸ್ಕ ಸ್ನೇಹಿತರು ನಡೆಸಿದ ವಿಚಾರದಾರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
115 ಕ್ಕೂ ಹೆಚ್ಚು ಪುಸ್ತಕಗಳನ್ನು ಸಹಸ್ರಾರು ವಿಚಾರ ಪ್ರಚೋದಕ ಭಾಷಣಗಳನ್ನು ನೂರಾರು ಸಂಶೋಧನಾ ಪ್ರಬಂಧಗಳನ್ನು ಹಾಗೂ ಉತ್ತಮ ಸಂಶೋಧನಾ ವಿದ್ಯಾರ್ಥಿ ಸಮೂಹವನ್ನು ನಾಡಿಗೆ ಅರ್ಪಿಸಿದ ಡಾ. ಕಲಬುರ್ಗಿಯವರು ಧರ್ಮಾಂಧತೆ ಅಂಧಶ್ರದ್ಧೆ ಸಹಿಸುತ್ತಿರಲಿಲ್ಲ. ನಾಡಿನಾದ್ಯಂತ ಜಾಗೃತಿಗೆ ಮುಂದಾದ ಇವರು ಲಿಂಗಾಯತ ಸ್ವತಂತ್ರ ಧರ್ಮ ಎಂಬುದನ್ನು ಆಧಾರ ಸಹಿತ ಪ್ರತಿಪಾದಿಸಿದ್ದರು. ಅಂತವರನ್ನು ಹತ್ಯೆ ಮಡಿದ ಹಂತಕರನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ ಎಂದರು.
ಪ್ರೊ. ಜಿ.ಡಿ. ಮನೋಜ್ ಮಾತನಾಡಿ, ನಿರ್ಮಲ ಮನಸ್ಸೇ ಮಡಿ, ಉಳಿದಿದ್ದೆಲ್ಲ ಕಾಲ್ಮಡಿ ಎಂದು ಹೇಳಿದ ಕಲಬುರಗಿ ಯವರ ಬದುಕು ಬರಹ ಜೀವನ ಒಂದೇ ತೆರನಾಗಿತ್ತು. ಶ್ರಮಿಕರ ದೇಶ ಶ್ರಮದಲ್ಲಿಯೇ ಪಾವಿತ್ರ್ಯ ಕಂಡ ದೇಶದಲ್ಲಿ ಸತ್ಯ ಹೇಳಿದವರು ಹತ್ಯೆಗೀಡಾಗುತ್ತಾರೆ. ಆದರೆ ಮನುಷ್ಯ ಧರ್ಮದ ಚಿಂತಕರಾದ ಇವರನ್ನು ಕೊಲೆ ಮಾಡಿದ್ದು ದೇಶಕ್ಕೇ ಆದ ಅಪಮಾನ. ತನಿಖೆಗೆ ನಿರ್ಲಕ್ಷ್ಯ ಬೇಡ ತಕ್ಷಣ ಕಾನೂನು ಕ್ರಮವಾಗಲಿ ಎಂದು ಆಗ್ರಹಿಸಿದರು.
ಪ್ರಗತಿಪರ ಸಾಹಿತ್ಯ ಸಂಘಟಕ ರಾಮಾ ನಾಯ್ಕ ಹಂತಕರ ಬಂಧಿಸುವಲ್ಲಿ ಸರಕಾರ ಸೋತಿದೆ. ಆ ಹತ್ಯಾಕೋರರು ಬಲವಾದ ಮುಷ್ಟಿಯಲ್ಲಿ ರಕ್ಷಿಸಲ್ಪಡುತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ಎಂದರೆ ಬೇರೆಡೆಗೆ ಬೊಟ್ಟು ಮಾಡಿ ತೋರಬೇಕಿಲ್ಲ. ಭಾರತದ ಅಂತರಂಗದೊಳಗೆ ಧಾರ್ಮಿಕ ಭಯೋತ್ಪಾದಕ ಜನರು ಇದ್ದಾರೆ. ಅಂದರೆ ನಾವೇನು ಪುಕ್ಕಲರಾಗಿ ಹೆದರಿ ಕೂತು ಧರ್ಮಾಂಧರಿಗೆ ಸೋಲುವುದಿಲ್ಲ ಎಂದರು.
ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಕಿರಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಎನ್.ಎಲ್ ಕಾರ್ಮಿಕ ಸಂಘಟನೆ ಕಾರ್ಯದರ್ಶಿ ಎಂ.ಎಂ.ಹೆಗಡೆ, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ದಲಿತ ಸಂಘಟನೆಯ ಮುಂದಾಳು ಶ್ಯಾಮ ಸುಂದರ, ಸಿಐಟಿಯು ಮುಖಂಡರಾದ ಗೀತಾ ರಾಯ್ಕರ್, ಶುಷ್ಮಾ ಗುರವ್, ಮಾಯಾ ಕಾಣೇಕರ್ ತಾರಾ ನಾಯ್ಕ ಜಯಶ್ರೀ ಉಪಸ್ಥಿತರಿದ್ದರು.
ಭಾರತ ವಿದ್ಯಾರ್ಥಿ ಪೆಡರೇಷನ್ ಎಸ್.ಎಫ್.ಐ ಜಿಲ್ಲಾ ಸಂಚಾಲಕ ಗಣೇಶ್ ರಾಠೋಡ್ ಪ್ರಾಸ್ತಾವಿಕ ಮಾತನಾಡಿದರು. ವಿಮಲಾ ಪ್ರಭು ಸ್ವಾಗತಿಸಿದರು. ಸಿಐಟಿಯು ತಾ. ಕಾರ್ಯದರ್ಶಿ ಮಂಜುಳಾ ವಂದಿಸಿದರು.
Leave a Comment