ಹಳಿಯಾಳ ; ಉತ್ತಮ ಯುವಕರನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಜನಪ್ರತಿನಿಧಿಗಳ ಮೇಲೆ ಇದ್ದು ಪ್ರಸ್ತುತ ಶಿಕ್ಷಣಕ್ಕೆ ತುಂಬ ಮಹತ್ವ ಬಂದಿದ್ದು ಅದನ್ನು ಅರಿತು ಪಾಲಕರು ಮತ್ತು ಶಿಕ್ಷಕರು ಶೈಕ್ಷಣಿಕ ರಂಗದಲ್ಲಿ ಆಸಕ್ತಿವಹಿಸಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕಾ ಶಿಕ್ಷಕರ ದಿನೋತ್ಸವ ಆಚರಣಾ ಸಮಿತಿ, ತಾಲೂಕಾ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ಸಂಘ ಮತ್ತು ಹಳಿಯಾಳ ಮತ್ತು ದಾಂಡೇಲಿಯ ಸರಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯವು ಸ್ವಸ್ಥ ಸಮಾಜದ ಎರಡು ಮುಖಗಳಿದ್ದಂತೆ. ಅವುಗಳನ್ನು ಶಾಲೆಯಲ್ಲಿ ನೀಡಬೇಕಾಗಿದ್ದು, ರಾಷ್ಟ್ರದ ಉಜ್ಜಲ್ ಭವಿಷ್ಯವು ಶಿಕ್ಷಕರ ಕೈಯಲ್ಲಿದೆ. ಕಲಿಯುವ ಆಸಕ್ತಿವಿರುವವರಿಗೆ ಸರಕಾರವು ಸೈಕಲ್ ವಿತರಣೆ, ಉಚಿತವಾಗಿ ಸಮವಸ್ತ್ರ, ಶೂ, ಕುಡಿಯಲು ಹಾಲು, ಹಾಸ್ಟೇಲ್ಗಳ ವ್ಯವಸ್ಥೆ, ದೂರದ ಊರುಗಳಿಂದ ಆಗಮಿಸುವವರಿಗೆ ಬಸ್ ಪಾಸ್ ವ್ಯವಸ್ಥೆ, ಶಿಷ್ಯವೇತನ ಸೇರಿದಂತೆ ಇನ್ನಿತರ ಸಮಗ್ರ ಸೌಲಭ್ಯಗಳನ್ನು ನೀಡಲಾಗಿದೆ. ಜೊತೆಗೆ ತಾಲೂಕಿನ ಎಲ್ಲಾ ಶಾಲೆಗಳಿಗೆ ಒಟ್ಟೂ 600 ಕ್ಕೂ ಅಧಿಕ ಕಂಪ್ಯೂಟರ್ಗಳನ್ನು ಜೊತೆಗೆ ಜಮಖಾನೆಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದರು.
ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯದಿಂದ ಸೇರಿದ ಶಿಕ್ಷಣ ನೀಡುವುದರಿಂದ ಮುಂದಿನ ದಿನಗಳಲ್ಲಿ ಆಗುವ ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಕೌಶಲ್ಯಗಳು ಎಲ್ಲರಿಗೂ ಸ್ವಯಂ ಉದ್ಯೋಗದತ್ತ ಸಾಗಿಸಲು ಸಹಾಯಕಾರಿಯಾಗಿವೆ ಎಂದ ಅವರು ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮತ್ತು ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವಂತಹ ಗುರುಭವನದ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 10 ಲಕ್ಷ ರೂ ನೀಡುವ ಭರವಸೆಯನ್ನು ನೀಡಿ ಪಟ್ಟಣದಲ್ಲಿ ಸುಮಾರು 8 ಕೋಟಿ ರೂ ವೆಚ್ಚದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಒಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಇಡೀ ದೇಶದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಪ್ರತಿ ವರ್ಷ 5 ಲಕ್ಷ ಯುವ ಪಡೆಗೆ ಕೌಶಲ್ಯ ಅಭಿವೃದ್ದಿ ತರಬೇತಿ ಮತ್ತು ಅರಿವು ನೀಡಲಾಗುತ್ತಿದೆ. ಶಿಕ್ಷಣ ಮತ್ತು ಚಾರಿತ್ರದಿಂದ ಮಾತ್ರ ರಾಷ್ಟ್ರ ಪ್ರೇಮ ಉದ್ಬವಾಗಲು ಸಾಧ್ಯವಾಗಿದೆ.
ಇದೇ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನ, ಗುರುಚೇತನ ಕೈಪಿಡಿ ಬಿಡುಗಡೆ ಮತ್ತು ಗುರುಚೇತನ ಶಿಕ್ಷಕರ ವೃತ್ತಿಪರ ಅಭಿವೃದ್ದಿ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾಚಾರ್ಯರಾದ ಡಾ. ಎನ್.ತಮ್ಮಣ್ಣಗೌಡಾ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಫಾದರ ಜ್ಞಾನಪ್ರಕಾಶರಾವ್, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೋರ್ವೆಕರ, ತಹಶೀಲದಾರ ವಿದ್ಯಾಧರ ಗುಳಗುಳಿ, ಬಿಇಓ ಸಮೀರಅಹ್ಮದ ಮುಲ್ಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಮಾಧ್ಯಮಿಕ ಸಂಘದ ವಿಠ್ಠಲ್ ಬೋರೆಕರ, ಅಕ್ರಮ ಸಕ್ರಮ ಸಮಿತಿಯ ಸುಭಾಶ ಕೋರ್ವೆಕರ ಇತರರು ಇದ್ದರು.
Leave a Comment