ಸ್ವಚ್ಚ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸರ್ಕಾರ ಇದಕ್ಕಾಗಿ ಸಾಕಷ್ಟು ಪ್ರಚಾರ ನೀಡುತ್ತಿದ್ದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ದೇಶವನ್ನು ಸ್ವಚ್ಛವಾಗಿಡುವ ಅಭಿಯಾನ ನಡೆಯುವ ವೇಳೆ ಕುಮಟಾದ ಹಳಕಾರ ಪೊರೆಸ್ಟ್ ಪಂಚಾಯತ ಪ್ರದೇಶದ ಅರಣ್ಯದಲ್ಲಿ ವ್ಯಾಪಕ ಕಸದ ರಾಶಿ ಕಂಡು ಬರುತ್ತಿದೆ.
ಸರ್ಕಾರ ಅರಣ್ಯ ಉಳಿಕೆಗಾಗಿ ಈ ಕೆಲಸ ಮಾಡುವುದಕ್ಕಿಂತ ಮೊದಲೆ ಕುಮಟಾ ತಾಲೂಕಿನ ಹಳಕಾರ ಹಾಗೂ ಮೂರೂರು ಕಲ್ಲಬ್ಬೆ ವ್ಯಾಪ್ತಿಯ ಜನರು ಕಸದ ಬಗ್ಗೆ ಪ್ರಜ್ಞೆ ಬೆಳಸಿಕೊಂಡಿದ್ದರು. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲೆ ಪೋರೆಷ್ಟ ಪಂಚಾಯತ ಎಂಬುದನ್ನು ಹುಟ್ಟುಹಾಕಿದ್ದ ಊರ ಜನರು ಆ ಮೂಲಕ ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶ ಹಾಗೂ ಅದರಲ್ಲಿ ಮರಮಟ್ಟುಗಳು ಯಾವುದೇ ಆತಂಕ ಇಲ್ಲದೆ ಬೆಳೆಯುವಂತೆ ನೋಡಿಕೊಂಡಿದ್ದರು. ಅದು ಈಗಲು ಇಲ್ಲಿ ಮುಂದುವರಿದೆ.
ಈ ಪೊರೆಷ್ಟ ಪಂಚಾಯತದ ಅಧಿಕಾರ ಸಂಪೂರ್ಣ ಜನರ ಕೈಯಲ್ಲಿದೆ. ಹೀಗಾಗಿ ಅರಣ್ಯ ಇಲಾಖೆ ತನ್ನ ಅಧಿಕಾರವನ್ನು ಈ ಪಂಚಾಯತಗಳ ಮೇಲೆ ಪ್ರಯೋಗಿಸುವಂತಿಲ್ಲ ಎಂಬುದನ್ನ ಬ್ರಿಟಿಷ್ ಕಾಲದಲ್ಲಿ ರೂಪಿಸಿದ ಕಾಯ್ದೆ ಹೇಳುತ್ತದೆ. ಹೀಗಿದ್ದರೂ ಸಹ ಮೂರೂರು-ಕಲ್ಲಬ್ಬೆ ಪೊರೆಷ್ಟ ಪಂಚಾಯತದಲ್ಲಿ ನಡೆದ ವ್ಯಾಪಕವಾದ ಅವ್ಯವಹಾರದಿಂದಾಗಿ ಆ ಪಂಚಾಯತದ ಅಧಿಕಾರ ನಡೆಸಲು ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿ ಅನೇಕ ವರ್ಷಗಳಾಗಿವೆ. ಹಳಕಾರ ಫೋರೆಷ್ಟನ ಅಧಿಕಾರ ಜನರ ಕೈಯಲ್ಲೆ ಇದೆ. ಜನರ ಆಡಳಿತವಿರುವ ಹಳಕಾರ ಪೊರೆಷ್ಟ ಪಂಚಾಯತವನ್ನು ಈಗ ಕೆಲವು ವರ್ಷಗಳ ಹಿಂದೆ ಸರ್ಕಾರ ವಶಪಡಿಸಿಕೊಂಡಿತ್ತು. ಇದನ್ನು ಹಳಕಾರ ಭಾಗದ ಜನ ವಿರೋಧಿಸಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಿ ಮರಳಿ ಅಧಿಕಾರ ಪಡೆದುಕೊಂಡಿದ್ದರು ಎಂಬುದು ಇತಿಹಾಸ.
ಸರ್ಕಾರ ಅವೈಜ್ಞಾನಿಕ ಯೋಜನೆಗಳ ಜಾರಿ ಹಾಗೂ ಜನರ ಆಸೆಬುರುಕು ತನದ ಪರಿಣಾಮವಾಗಿ ದೇಶದಲ್ಲಿ ಈ ಹಿಂದೆ ಇದ್ದ ಅರಣ್ಯ ಪ್ರದೇಶಗಳು ಕರಗಲಾರಂಭಿಸಿವೆ. ಇದರಿಂದ ಘಟಿಸುತ್ತಿರುವ ಪ್ರಕೃತಿ ವಿಕೋಪಗಳನ್ನು ತಡೆಯಲು ಈಗಿರುವ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದನ್ನು ಮನಗಂಡ ಸರ್ಕಾರ ಜನರ ಅರಣ್ಯ ಇಲಾಖೆಯ ಮೂಲಕ ಸಹಭಾಗಿತ್ವದ ಗ್ರಾಮ ಅರಣ್ಯ ಸಮಿತಿಯನ್ನು ರಚಿಸಿದೆ ಅನೇಕ ವರ್ಷಗಳಾದವು. ಆದರೂ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳವುದು ಕಷ್ಟವಾಗಿದೆ. ಹಳಕಾರ ಪೋರೆಷ್ಟ ಪಂಚಾಯತ ವ್ಯಾಪ್ತಿಯ ಅರಣ್ಯವನ್ನು ಅಲ್ಲಿನ ಜನ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ನಿರ್ವಹಿಸುತ್ತ ಬಂದಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ವಿವಿಧ ರಾಜ್ಯಗಳ ಹಿರಿಯ ಅಧಿಕಾರಿಗಳು ಈ ಪಂಚಾಯತ ವ್ಯಾಪ್ತಿಯ ಅರಣ್ಯ ವೀಕ್ಷಣೆಗೆ ಬಂದಿರುವುದು ಹಾಗೂ ಪಂಚಾಯತ ಕಚೇರಿಯಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ಬರೆದಿರುವುದು ಸಾಕ್ಷಿಯಾಗಿದೆ.
ಹಳಕಾರ ಪೊರೆಷ್ಟ್ ಪಂಚಾಯತ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಜನರಾರು ಹಸಿರು ಮರ ಕಡಿಯುವಂತಿಲ್ಲ. ಗೊಬ್ಬರ ಮಾಡಲು ಹಾಗೂ ದನದ ಕೊಟ್ಟಿಗೆಯಲ್ಲಿ ಹಾಸಲು ಅರಣ್ಯದಲ್ಲಿ ಬಿದ್ದ ತೆರಕನ್ನು ತೆಗೆದುಕೊಂಡು ಹೋಗಬಹುದು. ಉರುವಲಕ್ಕಾಗಿ ಅರಣ್ಯದಲ್ಲಿ ಬಿದ್ದ ಮರದ ಜಿಗ್ಗುಗಳನ್ನು ಜನರು ಆಯ್ದುಕೊಂಡು ಸಾಗಿಸಬಹುದು. ಜನರ ಉರುವಲ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಸೌದೆಗಳನ್ನ ಪೊರೆಷ್ಟ ಪಂಚಾಯತದ ಆಡಳಿತ ಮಂಡಳಿ ರಿಯಾಯತಿ ದರದಲ್ಲಿ ನೀಡುತ್ತದೆ. ಈ ಪಂಚಾಯತ ವ್ಯಾಪ್ತಿಯ ಜನರನ್ನು ಬಿಟ್ಟು ಹೊರಗಿನವರು ಮರಮಟ್ಟುಗಳನ್ನು ಕಡಿದರೆ ಅಂತವರಿಗೆ ಆಡಳಿತ ಮಂಡಳಿ ದಂಡ ವಿಧಿಸುತ್ತದೆ. ಇದರ ಹೊರತಾಗಿ ಆಡಳಿತ ಮಂಡಳಿಯು ಪ್ರತಿವರ್ಷ ಜನರ ಸಹಭಾಗಿತ್ವದಲ್ಲಿ ಸಾವಿರಾರು ಗಿಡಗಳನ್ನು ಈ ಅರಣ್ಯ ವ್ಯಾಪ್ತಿಯಲ್ಲಿ ನೆಡಯವ ಪದ್ದತಿಯನ್ನ ಇಟ್ಟುಕೊಂಡಿದೆ. ಅಪರೂಪದ ಔಷಧಿ ಸಸ್ಯಗಳ ವನವನ್ನು ಸಹ ಇಲ್ಲಿ ನಿರ್ಮಿಸಿದೆ. ಫೋರೆಷ್ಟ ಪಂಚಾಯ ವ್ಯಾಪ್ತಿಯನ್ನು ಬೇರೆಯವರು ಅತಿಕ್ರಮಣ ಮಾಡದಂತೆ ತಡೆಯುವುದಕ್ಕಾಗಿ ಅರಣ್ಯದ ಸುತ್ತ ಆಳಗಲದ ಅಗಳವನ್ನ ತೊಡಿಸಿದೆ.
ಇದರೊಮದಿಗೆ ಅರಣ್ಯ ಪ್ರದೇಶ ಸ್ವಚ್ಛವಾಗಿಡುವುದಕ್ಕಾಗಿ ಹಾಗೂ ಅಕ್ರಮವಾಗಿ ಯಾರು ಮರಮಟ್ಟುಗಳನ್ನು ಕಡಿಯುವುದನ್ನು ನಿಯಂತ್ರಿಸುವುದಕ್ಕಾಗಿ ವಾಚಮನ್ಗಳನ್ನ ನೇಮಿಸಿಕೊಳ್ಳುವುದರ ಮೂಲಕ ಕಣ್ಗಾವಲನ್ನು ಇಟ್ಟಿದೆ. ಇದರಿಂದ ಈ ಅರಣ್ಯ ಪ್ರದೇಶ ಸದಾ ಹಸಿರಿನಿಂದ ಹಂಗೊಳಿಸುವುದರ ಜೊತೆಗೆ ಅರಣ್ಯ ಪರಿಸರ ಸ್ವಚ್ಛವಾಗಿದೆ. ಇದರಿಂದ ಈ ಅರಣ್ಯ ಪ್ರದೇಶದಲ್ಲಿ ಕುಮಟಾ, ಹೆಗಡೆ ಭಾಗದ ನೂರಾರು ಜನರು ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಬರುತ್ತಾರೆ.
ಇಷ್ಟೊಂದು ಸುಂದರ ಹಾಗು ಸ್ವಚ್ಛವಾಗಿರುವ ಹಳಕಾರ ಪೊರೆಷ್ಟ ಪಂಚಾಯತ ಅರಣ್ಯ ಪ್ರದೇಶವನ್ನು ಹಾಳುಗೆಡುವ ಪ್ರಯತ್ನ ಈಚೆಗೆ ನಡೆಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಲ್ಲಿನ ಪರಿಸರ ಹಾಳಾಗುವುದು ಖಂಡಿತ. ಇದನ್ನು ತಡೆಯುವುದು ಹಳಕಾರ ಫೋರೆಷ್ಟ ಪಂಚಾಯತದ ಆಡಳಿತ ಮಂಡಳಿಯದಷ್ಟೆ ಕರ್ತವ್ಯವಲ್ಲ. ಉತ್ತಮ ಪರಿಸರ ಇರಬೇಕು ಎಂದು ಬಯಸುವವರು ಸಹ ಇದನ್ನು ತಡೆಯಲು ಮುಂದಾಗುವುದು ಅವಶ್ಯವಿದೆ.
Leave a Comment