ಕಾರವಾರ:
ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಪತ್ತಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹುತಾತ್ಮರಾದವರ ಧೈರ್ಯ ಮತ್ತು ಸೇವಾ ಮನೋಭಾವನೆಯು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದು ಅಂಕೋಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಂಡುರಂಗ ಪೈ ಹೇಳಿದರು.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಗರದ ಕಾರವಾರ ಅರಣ್ಯ ಉಪವಿಭಾಗ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 1992ರಿಂದ ಪ್ರಾರಂಭಿಸಿ 2013 ರವರೆಗೆ ನ.10ರಂದು ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ ದೇಶಾದ್ಯಂತ 2014ರಲ್ಲಿ ಸೆ.11ರಂದು ಅರಣ್ಯ ಹುತಾತ್ಮರ ದಿನವೆಂದು ಘೋಷಿಸಲಾಯಿತು. ಅಂದಿನಿಂದ ರಾಜ್ಯದಲ್ಲಿಯೂ ಕೂಡ ಸೆ.11ರಂದೇ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಹುತಾತ್ಮರ ಶೌರ್ಯ ಸಾಹಸಗಳನ್ನು ಅನುಕರಣೆ ಮಾಡಲು ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ. ಸೇವಾ ಮನೋಭಾವ ವೃದ್ಧಿಸುವ ಸಲುವಾಗಿ ಅವರನ್ನು ನೆನಪಿನಲ್ಲಿಟ್ಟುಕೊಂಡು ಶ್ರದ್ಧಾಂಜಲಿ ಕಾರ್ಯದ ಮೂಲಕ ಅವರು ಮಾಡಿದ ಕಾರ್ಯಗಳು ಮಾರ್ಗದರ್ಶಕವಾಗಿವೆ ಎಂದರು.
ಕಾಡು ಪ್ರಾಣಿಗಳು ನಾಡಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಅವುಗಳನ್ನು ಪುನಃ ಕಾಡಿಗೆ ಕಳುಹಿಸಿ ಜನರ ರಕ್ಷಣೆ ಮಾಡುವ ಸಂದರ್ಭದಲ್ಲಿ ಹಾಗೂ ಅರಣ್ಯವನ್ನು ಕಾಳ್ಗಿಚ್ಚಿನಿಂದ ರಕ್ಷಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಾರೆ. ಜನವರಿಯಿಂದ ಮೇ ವರೆಗೆ ಅರಣ್ಯ ಸಂಪತ್ತು ಕಾಳ್ಗಿಚ್ಚಿಗೆ ಬಲಿಯಾಗುವ ಆತಂಕ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲು-ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ದೇಶದ ಗಡಿ ಕಾಯುವ ಸೈನಿಕರಂತೆ ಅರಣ್ಯ ರಕ್ಷಣೆಯ ಕಾರ್ಯ ನಿರ್ವಹಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೌನಾಚರಣೆ ಮೂಲಕ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಲಾಯಿತು. ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ನಾಯ್ಕ ಕಳೆದ 50ವರ್ಷಗಳಲ್ಲಿ ಕರ್ತವ್ಯದಲ್ಲಿದ್ದಾಗ ಮಡಿದ ಅರಣ್ಯ ಹುತಾತ್ಮರ ಹೆಸರುಗಳನ್ನು ಓದಿ ನೆನಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಉಪವಲಯ ಸಂರಕ್ಷಣಾಧಿಕಾರಿ ಕೆ.ಗಣಪತಿ, ಸಹಾಯಕ ವಲಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಮುಂತಾದವರು ಇದ್ದರು.
Leave a Comment