ಹಳಿಯಾಳ ; ಪ್ರಸ್ತುತ ಪಶು, ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬರುತ್ತಿದ್ದು ಜೊತೆಗೆ ಕೃಷಿ ಕಾರ್ಮಿಕರ ಸಂಖ್ಯೆಯು ಕಡಿಮೇಯಾಗಿದ್ದು ಇದರಿಂದ ಕೃಷಿ ಕ್ಷೇತ್ರವು ನಲುಗುವಂತಾಗಿರುವುದು ಕೃಷಿ ಪ್ರಧಾನ ಭಾರತ ದೇಶದಲ್ಲಿ ಕೃಷಿ ಕ್ಷೇತ್ರದತ್ತ ಯುವಕರು ಆಸಕ್ತಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಆರೋಗ್ಯದಂತೆಯೇ ಪಶುಗಳ ಆರೋಗ್ಯವು ಅವಶ್ಯವಾಗಿದ್ದು ರಾಜ್ಯ ಸರಕಾರವು ಇಗಾಗಲೇ ನೂರಾರು ಸಂಖ್ಯೆಯಲ್ಲಿ ಪಶು ಆಸ್ಪತ್ರೆಗಳನ್ನು ನಿರ್ಮಿಸಿ ಸೂಕ್ತವಾದ ಸಿಬ್ಬಂದಿಗಳನ್ನು ನೀಡುವುದರ ಮೂಲಕ ಪಶು ಆರೋಗ್ಯಕ್ಕೆ ಮಹತ್ವ ನೀಡಿದೆ ಎಂದ ಅವರು ಮಾನವನು ಪ್ರಾಣಿಗಳನ್ನು ಪ್ರೀತಿಸುವುದರ ಜೊತೆಗೆ ಅವುಗಳು ಅನಾರೋಗ್ಯಕ್ಕೆ ಈಡಾದಾಗ ಸೂಕ್ತವಾದ ಚಿಕಿತ್ಸೆಯನ್ನು ನೀಡುವುದರ ಮೂಲಕ ಮಾನವಿಯತೆಯನ್ನು ಮೆರೆಯಬೇಕು, ಮನುಷ್ಯ ರೋಗಮುಕ್ತನಾಗಲು ಆತನ ದಿನನಿತ್ಯದ ಜೀವನ ಶೈಲಿಯಲ್ಲಿ ಬದಲಾವಣೆಯಾಬೇಕಾಗಿದೆ. ಸರಕಾರವು ಆರೋಗ್ಯ ಕಾರ್ಡಗಳನ್ನು ವಿತರಿಸಲು ಮುಂದಾಗಿದ್ದು ಇದರಿಂದ 1.5 ಲಕ್ಷ ಕುಟುಂಬಳಿಗೆ ಉಪಯೋಗವಾಗಲಿದೆ ಎಂದರು.
ಯಶಸ್ವಿನಿ ಯೋಜನೆಯನ್ನು ರೂಪಿಸಲಾಗಿದ್ದು ಇದನ್ನು ಎಲ್ಲಾ ರೈತರಿಗೆ ಸಿಗುವಂತೆ ಮಾಡಲಾಗುವುದು,. ಸರಕಾರವು ಹಲವಾರು ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅವುಗಳನ್ನು ಅರ್ಹ ಬಡ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪುವಂತೆ ಮಾಡಬೇಕಾಗಿದೆ. ಜಾನುವಾರು ಸಂಪತ್ತು ಹೆಚ್ಚಳಕ್ಕೆ ಸರಕಾರವು ಬದ್ದವಾಗಿದ್ದು ಇದಕ್ಕೆ ಜನರ ಸಹಕಾರವು ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಸರಕಾರವು ರಾಜ್ಯದ ಎಲ್ಲಾ ಭಾಗಗಳಲ್ಲಿ ಜಾನುವಾರುಗಳಿಗಾಗಿ ವಿಶೇಷ ಆಸ್ಪತ್ರೆಗಳನ್ನು ತೆರೆಯಲು ಯೋಚನೆ ನಡೆಸಿದೆ ಎಂದರು.
ಇದೇ ಸಂದರ್ಭದಲ್ಲಿ ಭತ್ತದ ಬಣವೆಗಳನ್ನು ಬೆಂಕಿ ಅನಾಹುತದಿಂದ ಕಳೆದುಕೊಂಡ ಸುಮಾರು 11 ರೈತರಿಗೆ ಕೃಷಿ ಇಲಾಖೆಯಿಂದ ಪರಿಹಾರ ಚೆಕ್ಗಳನ್ನು ವಿತರಿಸಲಾಯಿತು. ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಉಪನಿರ್ದೆಶಕ ಸುಬ್ರಾಯ್ ಭಟ್ಟ್, ತಹಶೀಲದಾರ ವಿದ್ಯಾಧರ ಗುಳಗುಳಿ ಮೊದಲಾದವರು ಇದ್ದರು.
Leave a Comment