ಕಾರವಾರ: ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ವಿಷಯದಲ್ಲಿ ಶಾಸಕ ಸತೀಶ್ ಸೈಲ್ ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಸಂಘಟಿತ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳು ಶಾಸಕರ ವರ್ತನೆ ವಿರುದ್ದ ದಿಕ್ಕಾರ ಕೂಗಿದರು. ಒಂದು ವಾರದೊಳಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡದಿದ್ದಲ್ಲಿ ಶಾಸಕರ ಮನೆ ಮುಂಬಾಗ ದರಣಿ ನಡೆಸುವದಾಗಿ ಎಚ್ಚರಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಸಿದ್ಧು ಗೌಡಾ, ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗಿ ಅನೇಕ ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲ. ಮಾಜಾಳಿಯಲ್ಲಿ ಹೊಸ ಕಟ್ಟಡ ನಿರ್ಮಿಸಿದರೂ ರಾಜಕೀಯ ಕಾರಣಗಳಿಂದ ಕಾಲೇಜನ್ನು ಅಲ್ಲಿ ಸ್ಥಳಾಂತರಿಸಿಲ್ಲ ಎಂದು ಆರೋಪಿಸಿದರು. ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಿಸುವ ಪ್ರಕ್ರಿಯೆ ನಡೆದಾಗ ಸ್ಥಳೀಯ ಶಾಸಕ ಸತೀಶ್ ಸೈಲ್ ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದ್ದಾರೆ. ಹೊಸ ಕಾಲೇಜು ನಿರ್ಮಾಣ ವೇಳೆಯೂ ಅದಕ್ಕೆ ಹಲವು ಬಾರಿ ಅಡ್ಡಗಾಲು ಹಾಕಿರುವ ಶಾಸಕರು, ಮಂದಗತಿಯಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಹಳೇ ಕಟ್ಟಡದಲ್ಲಿ ನಡೆಯುತ್ತಿರುವ ಕಾಲೇಜಿಗೆ ತರಗತಿಗಳಿಲ್ಲ. ಶೌಚಾಲಯವಿಲ್ಲ. ಪ್ರಯೋಗಾಲಯವೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದು, ಬೇರೆ ಊರುಗಳಿಮದ ವಿದ್ಯಾಬ್ಯಾಸಕ್ಕೆ ಬಂದವರು ಖಾಸಗಿ ಕಾಲೇಜನ್ನು ಅವಲಂಭಿಸಬೇಕಾಗಿ ಬಂದಿದೆ ಎಂದು ವಿವರಿಸಿದರು. ಶಾಸಕರದ್ದೇ ಖಾಸಗಿ ಕಾಲೇಜು ನಡೆಯುತ್ತಿದ್ದು, ಇದರ ಉದ್ದಾರಕ್ಕಾಗಿ ಸರ್ಕಾರಿ ಕಾಲೇಜನ್ನು ಮೂಲೆಗುಂಪು ಮಾಡಲಾಗಿದೆ ಎಂದು ದೂರಿದರು. ವಿದ್ಯಾರ್ಥಿಗಳ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಿದ್ದ ಪ್ರಾಚಾರ್ಯರೊಬ್ಬರನ್ನು ಏಕಾಏಕಿ ಕೆಲಸದಿಂದ ದೂರವಿಡಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಾದ ಶ್ವೇತಾ, ಸೌಮ್ಯಾ, ರಶ್ಮಿ, ಭಾನುಕುಮಾರ, ಅನಿಲ, ಸಂತೋಷ, ಕಿರಣ ಆಂಜನೇಯ ಇತರರು ಪ್ರತಿಭಟನೆಯಲ್ಲಿದ್ದರು. ನಂತರ ಜಿಲ್ಲಾಡಳಿತದ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
Leave a Comment