ಕಾರವಾರ:
ಬಾಡ ಗ್ರಾಮದ ಸರ್ವೆ ನಂ.268ರ ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಇಲ್ಲಿನ ಸ್ಥಳೀಯರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಪದ್ಮನಾಭ ನಗರ, ಗುರುಮಠ, ಕೆನರಾ ಬ್ಯಾಂಕ್ ಕಾಲೋನಿ ಹಾಗೂ ಮಹಾದೇವನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿದ್ದು 3 ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿನ ನಿವಾಸಿಗಳೆಲ್ಲರೂ ದಿನನಿತ್ಯದ ಉಪಯೋಗಕ್ಕಾಗಿ ನಗರಸಭಾ ಸಾರ್ವಜನಿಕ ಕಾಂಕ್ರೀಟ್ ರಸ್ತೆಯನ್ನು ಅವಲಂಭಿಸಿದ್ದಾರೆ. ಆದರೆ ಶನೀಶ್ವರ ದೇವಸ್ಥಾನದ ಹತ್ತಿರ ಈ ರಸ್ತೆಗೆ ಸಂಪರ್ಕ ಸಾಧಿಸಲು ಸಾಧ್ಯವಿರದೇ ಇರುವ ಕಾರಣ ರಸ್ತೆಯು ಅಪೂರ್ಣವಾಗಿದೆ. ಕೆನರಾ ಬ್ಯಾಂಕ್ ಕಾಲೋನಿಯಿಂದ ಹಾಗೂ ಮಹಾದೇವಸ್ಥಾನ ಎದುರಿನಿಂದ ಹೋಗುವ ರಸ್ತೆಗೆ ಮಧ್ಯದಲ್ಲಿ ಸರಕಾರಕ್ಕೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸದೆ ಖುಲ್ಲಾ ಇಡಲಾಗಿದೆ. ಆದ್ದರಿಂದ ಎರಡೂ ಬದಿಗಳಲ್ಲಿನ ರಸ್ತೆಯನ್ನು ಸಂಪರ್ಕಿಸಲು ಸುಮಾರು 120ಮೀ ಅಂತರ ಹಾಗೇ ಇದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಇದು ಸರಕಾರಿ ಜಮೀನು ಆಗಿರುವುದರಿಂದ ಸಾರ್ವಜನಿಕ ಸಂಪರ್ಕ ರಸ್ತೆ ನಿರ್ಮಿಸಲು ತಮ್ಮಿಂದ ಅಸಾಧ್ಯ ಎಂದು ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಸರಕಾರಕ್ಕೆ ಸೇರಿದ ಈ ಜಾಗದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಆಗದೇ ಇರುವುದರಿಂದ ಇಲ್ಲಿನ ನಿವಾಸಿಗಳಾದ ತಮಗೆ ಅನೇಕ ತೊಂದರೆಗಳು ಉಂಟಾಗುತ್ತಿವೆ. ದಿನ ನಿತ್ಯವೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸೇರಿದಂತೆ ಎಲ್ಲರಿಗೂ ಸಂಚರಿಸಲು ಕಷ್ಟವಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಅಲ್ಲದೇ ಖುಲ್ಲಾ ಇರುವ ಈ ಸರಕಾರಿ ಜಮೀನಿಗೆ ಸಂಪರ್ಕ ರಸ್ತೆ ಇಲ್ಲದಿರುವ ಕಾರಣ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಮಳೆಗಾಲದಲ್ಲಿ ನೀರು ತುಂಬಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಧಿಕಾರಿಗಳನ್ನು ಸ್ಥಳ ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಬೇಕು ಹಾಗೂ ಸದ್ರಿ ಸ್ಥಳದಲ್ಲಿ ಸಂಪರ್ಕ ರಸ್ತೆಗೆ ಅತೀ ಅವಶ್ಯವಿರುವ ಜಾಗವನ್ನು ಸರಕಾರದ ಸ್ವಾಧೀನದಲ್ಲಿರುವ ಬಾಡ-1 ಗ್ರಾಮದ ಜಮೀನು ಸರ್ವೆ ನಂ.268 ಹಿಸ್ಸಾ 1+2/1 ಕ್ಷೇತ್ರ 0-2-0 ಹಾಗೂ ಸರ್ವೆ ನಂ.268 ಹಿಸ್ಸಾ1+2/3 ಕ್ಷೇತ್ರ 0-20-14ನೇದರಲ್ಲಿ ಅವಶ್ಯವಿರುವ ಜಾಗವನ್ನು ಮಂಜೂರಿ ಮಾಡಿ ನಗರಸಭೆಗೆ ಸೂಕ್ತ ನಿರ್ದೇಶನ ನೀಡಿ ರಸ್ತೆ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅರ್ಚಕ ರಾಮಕೃಷ್ಣ ಗಣೇಶ ಗಾಯತ್ರಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸತೀಶ ಕೋಳಂಬಕರ, ಸಿದ್ಧಾರ್ಥ ನಾಯಕ ಮುಂತಾದವರು ಇದ್ದರು.
Leave a Comment