ಕಾರವಾರ: ವಿದ್ಯಾರ್ಥಿಗಳು ಕೆಟ್ಟ ಚಟಗಳತ್ತ ಆಕರ್ಷಿತರಾಗುವ ಮುನ್ನೆ ಎಚ್ಚರವಹಿಸುವುದು ಅತಿ ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿ-ಹರೆಯದ ವಯಸ್ಸಿನವರು ಅಗತ್ಯವಿರದ ವಿಷಯಗಳಿಗೆ ಆಕರ್ಷಿತರಾಗಿ, ದಾರಿ ತಪ್ಪುತ್ತಿದ್ದಾರೆ. ಒಮ್ಮೆ ಕೆಟ್ಟ ಚಟಗಳತ್ತ ಮುಖಮಾಡಿದರೆ ಅದರಿಂದ ಬಿಡುಗಡೆ ಹೊಂದುವುದು ಬಹಳ ಕಷ್ಟವಾಗುತ್ತದೆ. ಇಂತವರು ಕಾನೂನಿನ ಅರಿವು ಹೊಂದಿದ್ದರೆ ಅದರಿಂದ ದೂರವಿರಲು ಸಾಧ್ಯ ಎಂದು ಹೇಳಿದರು. ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಸಂಸ್ಕಾರ, ಶಿಸ್ತು ಕಲಿಯಬೇಕು. ಇದರಿಂದ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.
ಉಪನ್ಯಾಸ:
ಹಿರಿಯ ವಕೀಲ ಜಿ.ಎನ್.ಜಾಂಬವಳಿಕರ, ಪೊಲೀಸ್ ದೂರು ಪ್ರಾಧಿಕಾರ ಹಾಗೂ ವಕೀಲೆ ರಾಜೇಶ್ವರಿ ಕೆ.ವಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮತ್ತು ಮಾದಕ ದ್ರವ್ಯಗಳ ನಿಷೇಧ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸ್ನೇಹ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕರಾದ ದೀಪಕ ತಳೇಕರ ಸ್ವಾಗತಿಸಿದರು. ಸತೀಶ ಗಾಂವ್ಕರ ವಂದಿಸಿದರು. ದತ್ತಾತ್ರೇಯ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ವಿ.ಎಮ್.ಹೆಗಡೆ ಇದ್ದರು.
Leave a Comment