ಕಾರವಾರ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಮುಂಬಡ್ತಿ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಕೂಡಲೇ ಅನುಮೋದನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹಿಂದೂಳಿದವರಿಗೆ ಉದ್ಯೋಗ, ಶಿಕ್ಷಣ, ರಾಜಕೀಯದಲ್ಲಿ ಮೀಸಲಾತಿ ನೀಡಬೇಕು. ಉದ್ಯೋಗದ ಪ್ರತಿ ಹಂತದಲ್ಲಿಯೂ ಮುಂಬಡ್ತಿ ಪಡೆಯುವಾಗ ಮೀಸಲಾತಿ ಒದಗಿಸಿಕೊಳ್ಳಲು ಅನುವು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ದಲಿತರನ್ನು ಓಲೈಸಲು ಕೆಲ ರಾಜಕೀಯ ಪಕ್ಷಗಳು ದಲಿತರ ಮನೆಯಲ್ಲಿ ಊಟ ಮಾಡುವದು, ಅಂಬೇಡ್ಕರ್ ಜಯಂತಿ ಆಚರಿಸುವದನ್ನು ಮಾಡುತ್ತಿವೆ. ಇದರೊಂದಿಗೆ ದಲಿತರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು. ಯಾವದೇ ದಲಿತ ನೌಕರರಿಗೆ ಹಿಂಬಡ್ತಿ ನೀಡಬಾರದು. ಸರ್ಕಾರಿ ಕೆಲಸಗಳ ಶೇ. 50ರಷ್ಟು ದಲಿತರಿಗೆ ಗುತ್ತಿಗೆ ನೀಡಬೇಕು ಎಂಬ ಕಾನೂನಿಗೆ ಕೂಡಲೇ ಅನುಮೋದನೆ ನೀಡುವಂತೆ ಆಗ್ರಹಿಸಿದರು. ಸಂಘಟನೆ ಪ್ರಮುಖರಾದ ಶಿವಾಜಿ ಬನವಾಸಿ, ಮಹೇಶ ನಾಯ್ಕ, ಉದಯ ಜೋಗಳೇಕರ್, ನಾಗೇಶ ಮಠದಕೇರಿ, ಶಿವಾಜಿ ಮೊಟರಿ ಇತರರಿದ್ದರು.
Leave a Comment