ಕಾರವಾರ:
ನಗರದಲ್ಲಿ ನಿರ್ವಹಣೆ ನೆಪದಲ್ಲಿ ಪ್ರತಿ ಬುಧವಾರ ಈಡಿದಿನ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಈ ಕ್ರಮದ ವಿರುದ್ದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅಸಮಧಾನ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಹೆಸ್ಕಾಂ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರತಿ ಬುಧವಾರ ನಗರದಲ್ಲಿ ವಿದ್ಯುತ್ ಕಡಿತವಾಗುತ್ತಿದ್ದು ಇದರಿಂದ ಬ್ಯಾಂಕ್, ಕೈಗಾರಿಕೆ, ಗೃಹೋಪಯೋಗ ಸೇರಿದಂತೆ ವಿವಿಧ ವರ್ಗದವರಿಗೆ ತೊಂದರೆಯಾಗುತ್ತಿರುವ ಬಗ್ಗೆ ವಿವರಿಸಿದರು. ಬೇರೆ ಯಾವ ನಗರದಲ್ಲಿಯೂ ಹೀಗೆ ವಿದ್ಯುತ್ ಕಡಿತ ಮಾಡಲಾಗುವದಿಲ್ಲ. ಇಲ್ಲಿ ಮಾತ್ರ ಬುಧವಾರ ಪೂರ್ತಿ ವಿದ್ಯುತ್ ತೆಗೆಯಲಾಗುತ್ತದೆ. ಒಂದು ಕಡೆ ನಿರ್ವಹಣೆ ಇದ್ದರೆ ಈಡಿ ನಗರದಲ್ಲಿ ಎಲ್ಲಿಯೂ ವಿದ್ಯುತ್ ಇರುವದಿಲ್ಲ. ಹೀಗೆ ಪ್ರತಿವಾರವೂ ವಿದ್ಯುತ್ ಕಡಿತ ಮಾಡುವದರಿಂದ ಬ್ಯಾಂಕ್ ವ್ಯವಹಾರಗಳು, ಕೈಗಾರಿಕೆಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎಸ್.ನರಸಿಂಹಮೂರ್ತಿ, ಜಂಪ್ಲೈನ್ ಅಥವಾ ಸಂಪರ್ಕ ಮಾರ್ಗದಲ್ಲಿ ಮರಗಳ ಕೊಂಬೆ ಕಡಿಯುವ ಅಥವಾ ಉಪಕರಣಗಳಿಗೆ ಗ್ರೀಸಿಂಗ್ ಮಾಡುವ ಹಿನ್ನೆಲೆಯಲ್ಲಿ ಒಂದು ದಿನ ನಿರ್ವಹಣೆ ಸಂಬಂಧ ವಿದ್ಯುತ್ ಕಡಿತ ಮಾಡಲಾಗುತ್ತದೆ. ಆದರೆ ಬುಧವಾರವೇ ಮಾಡಬೇಕೆಂದೇನೂ ಇಲ್ಲ. ಅಲ್ಲದೆ ಇಡೀ ನಗರಾದ್ಯಂತ ವಿದ್ಯುತ್ ಕಡಿತ ಮಾಡುವ ಅಗತ್ಯವೂ ಇರುವುದಿಲ್ಲ ಎಂದರು. ಶನಿವಾರದಂದು ವಿದ್ಯುತ್ ಸಂಪರ್ಕ ಮಾರ್ಗಗಳಲ್ಲಿನ ಸಮಸ್ಯೆ ಪಟ್ಟಿ ಮಾಡಿಕೊಂಡು ಬುಧವಾರ ಅದರ ನಿರ್ವಹಣೆ ಮಾಡುವ ಪರಿಪಾಠ ಹಿಂದಿನಿಂದಲೂ ಇರುವುದರಿಂದ ಬುಧವಾರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದನ್ನು ಬಗೆಹರಿಸಬಹುದಾಗಿದೆ ಎಂದರು.
ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಕೈಗಾರಿಕೆಗಳು ಜಿಲ್ಲೆಗೆ ಬರುತ್ತಿಲ್ಲ. ಪ್ರತಿ ಬುಧವಾರ ಕಾರವಾರ ನಗರದ ಬ್ಯಾಂಕ್ ಹಾಗೂ ಕೈಗಾರಿಕೆಗಳಿಂದ ವಿದ್ಯುತ್ ಕಡಿತದ ಬಗ್ಗೆ ಬಹುದಿನಗಳಿಂದ ಆಕ್ಷೇಪವಿದ್ದು ಶೀಘ್ರವೇ ಪರಿಹರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಅಂತಿಮವಾಗಿ ಮುಂದಿನ ಬುಧವಾರ ಒಮ್ಮೆ ನಿರ್ವಹಣಾ ಕಡಿತ ನಂತರ ಮುಂದಿನ ಮೂರು ವಾರಗಳು ವಿದ್ಯುತ್ ಕಡಿತ ಇರಬಾರದು. ಅದರ ಫಲಿತಾಂಶ ನೋಡಿಕೊಂಡು ನಾಗರಿಕರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಕಾರವಾರ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್, ಸೆಕ್ಷನ್ ಅಧಿಕಾರಿಗಳಾದ ವಸಂತಲಕ್ಷ್ಮೀ, ರಷ್ಮೀ, ನಂಜಯ್ನಾಯ್ಕ್, ಪ್ರಶಾಂತ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ರೇವಣ್ಣಗೌಡ ಸಭೆಯಲ್ಲಿದ್ದರು.
Leave a Comment