ಕಾರವಾರ:
ಡೋಂಗ್ರಿ ಗ್ರಾಮ ಪಂಚಾಯ್ತಿ ಭಾಗದ ಜನರ ಸೇತುವೆಯ ಬಹುದಿನಗಳ ಬೇಡಿಕೆ ಪೈಕಿ ಸೇತುವೆ ನಿರ್ಮಾಣದ ಬೇಡಿಕೆ ಈಡೇರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅಂಕೋಲ ತಾಲೂಕು ಡೋಂಗ್ರಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 1.65 ಕೋಟಿ ರೂ ವೆಚ್ಚದ ತೂಗುಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.
ಡೋಂಗ್ರಿ-ಸುಂಕಸಾಳ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಯೋಜನೆ ಮಂಜೂರಾಗಿ ಕೇವಲ ಮೂರು ತಿಂಗಳಲ್ಲಿ ತೂಗುಸೇತುವೆ ಜನ ಬಳಕೆಗೆ ಉದ್ಘಾಟನೆಯಾಗಿದೆ. ಈ ಮೂಲಕ ಡೋಂಗ್ರಿ ಗ್ರಾಮ ಪಂಚಾಯ್ತಿ ಭಾಗದ 7 ಗ್ರಾಮಗಳ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.
ಡೋಂಗ್ರಿ ತೂಗುಸೇತುವೆ ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ 1.65 ಕೋಟಿ ರೂ. ಅನುದಾನ ಒದಗಿಸಿದ್ದು ಈ ಭಾಗದ ಜನರಿಗೆ ಈ ಸೇತುವೆ ಬಹೋಪಯೋಗವಾಗಿದೆ. ಬಹುಮುಖ್ಯವಾಗಿ ಈ ಪ್ರದೇಶದಲ್ಲಿ ವಾಸವಿರುವ ಸುಮಾರು 700ಕ್ಕೂ ಹೆಚ್ಚು ಕುಟುಂಬಗಳು ತುರ್ತು ಆರೋಗ್ಯ ಸಂಬಂಧಿ ವಿಷಯಗಳಿಗೆ ಅಥವಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸುಂಕಸಾಳ ಅಥವಾ ಈ ಭಾಗದ ರಾಜ್ಯ ಹೆದ್ದಾರಿ ರಸ್ತೆ ಸಂಪರ್ಕಕ್ಕೆ ಅನುಕೂಲವಾಗಿದೆ ಎಂದರು.
ಇದಕ್ಕೂ ಮುನ್ನ ಡೋಂಗ್ರಿಯಲ್ಲಿ ವಾಲ್ಮಿಕಿ/ಸಿದ್ದಿ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಈ ಪ್ರದೇಶದ ಜನರ ಮನೆಗಳಿಗೆ ಅಧಿಕೃತ ಸಂಖ್ಯೆ ಲಭ್ಯವಿಲ್ಲದಿದ್ದರೂ ಆಹಾರ ಪರಿತರ ಚೀಟಿ ಕೊಡಲು ಕ್ರಮ ವಹಿಸುವಂತೆ ಕುಮಟಾ ಮತ್ತು ಆಂಕೋಲ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ಬೆಳೆಹಾನಿ ಪರಿಹಾರ ವಿತರಣೆ ಸಂಬಂಧ ಸಮೀಕ್ಷೆ ವಿಳಂಬವಾಗಿದ್ದು ಶೀಘ್ರ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಹಾಗೂ ಈ ಭಾಗದ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ಸಿಗುವಂತೆ ಕ್ರಮ ವಹಿಸಬೇಕು ಎಂದರು.
ಸ್ಥಳೀಯ ಶಾಸಕ ಸತೀಶ್ ಸೈಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ್ ಶೆಟ್ಟಿ, ಪದ್ಮಶ್ರೀ ಪ್ರಶಸ್ತಿ ಪುಸ್ಕøತ ತೂಗುಸೇತುವೆ ವಿನ್ಯಾಸಕ ಗಿರೀಶ್ ಭಾರಧ್ವಾಜ್, ತಾ.ಪಂ.ಅಧ್ಯಕ್ಷೆ ಸುಜಾತಾ ಗಾವ್ಂಕರ್, ಜಿ.ಪಂ.ಸದಸ್ಯ ಜಗದೀಶ್ ನಾಯಕ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.
Leave a Comment