ಕಾರವಾರ:
ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ರಾತ್ರಿ ಅಸ್ನೋಟಿಯಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ರಾಜಸ್ಥಾನದ ಬಿಕಾನೇರ್ನಿಂದ ತಮಿಳುನಾಡಿನ ಕೊಯಮುತ್ತೂರಿಗೆ ತೆರಳುತ್ತಿದ್ದ ಎಕ್ಸಪ್ರೆಸ್ ರೈಲಿನ ಹವಾನಿಯಂತ್ರಿತ ಬೋಗಿಯ ಎಸಿ ಪ್ಯಾನೆಲ್ನಲ್ಲಿ ಶಾರ್ಟ ಸಕ್ರ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣ ವಿಷಯವನ್ನು ರೈಲಿನ ಚಾಲಕನ ಗಮನಕ್ಕೆ ತಂದರೆನ್ನಲಾಗಿದೆ. ಇದರಿಂದ ಎಚ್ಚೆತ್ತ ಚಾಲಕ ತಕ್ಷಣ ರೈಲಿನ ವೇಗವನ್ನು ಕಡಿಮೆ ಮಾಡಿದನಲ್ಲದೇ ಆ ಮೂಲಕ ಗಾಳಿಗೆ ಬೆಂಕಿ ಇತರ ಬೋಗಿಗಳಿಗೆ ಹರಡಿಕೊಳ್ಳುವುದನ್ನು ತಪ್ಪಿಸಿದನೆಂದು ಪ್ರಯಾಣಿಕರು ತಿಳಿಸಿದರು. ಕಾರವಾರ ಹಾಗೂ ಅಸ್ನೋಟಿ ಮಧ್ಯ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರೈಲನ್ನು ತಡೆಹಿಡಿಯಲಾಗಿತ್ತಲ್ಲದೇ ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಲಾಯಿತು. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮೊದಲೆ ಪ್ರಯಾಣಿಕರು ಹಾಗೂ ರೈಲಿನ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದರು. ಈ ಘಟನೆಯಿಂದ ರೈಲಿನ ಎಸಿ ಡಬ್ಬಿ ಭಾಗಶಃ ಹಾನಿಗೊಳಗಾಗಿದೆ.
ನಂತರ ರೈಲು ಹಾನಿಗೊಳಗಾದ ಎಸಿ ಡಬ್ಬಿಯನ್ನು ಕಾರವಾರದಲ್ಲಿಯೇ ಬಿಟ್ಟು ಕೊಯಮುತ್ತೂರಿನತ್ತ ತನ್ನ ಪ್ರಯಾಣವನ್ನು ಬೆಳೆಸಿತು. ಬಿಕಾನೇರ ಹಾಗೂ ಕೊಯಮುತ್ತೂರಿನ ನಡುವೆ ಓಡುವ ಈ ರೈಲು ಗೋವಾದ ಮಡಗಾಂ ಬಿಟ್ಟರೆ ಕಾರವಾದಲ್ಲಿ ನಿಲುಗಡೆಯಾಗುತ್ತದೆ.
ಕಾರವಾರದಿಂದ 10 ಕಿಮಿ ದೂರವಿರುವ ಅಸ್ನೋಟಿಯಲ್ಲಿ ಈ ರೈಲಿಗೆ ನಿಲುಗಡೆ ಇಲ್ಲದಿದ್ದರೂ ಕಾರವಾರ ನಿಲ್ದಾಣ ಹತ್ತಿರವಿರುವ ಹಿನ್ನಲೆಯಲ್ಲಿ ರೈಲಿನ ವೇಗ ಗಣನೀಯವಾಗಿ ಕಡಿಮೆ ಆಗಿತ್ತು ಎಂದು ರೈಲ್ವೇ ಇಲಾಖೆಯ ಮೂಲಗಳು ತಿಳಿಸಿವೆ. ಹೀಗಾಗಿ ಬೆಂಕಿ ಬೋಗಿಯಲ್ಲಿ ಹೊಗೆ ಕಂಡ ತಕ್ಷಣ ಚಾಲಕನಿಗೆ ರೈಲು ನಿಲ್ಲಿಸಲು ಅನುಕೂಲವಾಗಿದೆ. ಅಕಸ್ಮಾತ್ ರಾತ್ರಿ ವೇಳೆಯಲ್ಲಿ ವೇಗದಲ್ಲಿ ರೈಲು ಚಲಿಸುವಾಗ ಬೆಂಕಿ ತಗುಲಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆಯೂ ಇತ್ತು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದರು. ಈ ಘಟನೆಯಿಂದ ಕಾರವಾರ, ಮಂಗಳೂರು ಹಾಗೂ ಗೋವಾದ ನಡುವಿನ ಕೊಂಕಣ ರೈಲು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸ್ವಲ್ಪ ಕಾಲ ವ್ಯತ್ಯಯ ಉಂಟಾಯಿತ್ತು.
Leave a Comment