ಕಾರವಾರ:
ಇಂದನ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ಜಿಲ್ಲಾ ಯುವ ಘಟಕದ ಕಾರ್ಯಕರ್ತರು ನಗರದ ಸುಭಾಸ್ ಸರ್ಕಲ್ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಅಚ್ಛೆ ದಿನ್ ತರುವುದಾಗಿ ಜನರಿಗೆ ಭರವಸೆ ನೀಡಿತ್ತು. ಆದರೆ ಇದೀಗ ಸರಕಾರ ದಿನದಿಂದ ದಿನಕ್ಕೆ ಏರುಮುಖದಲ್ಲಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಪೆಟ್ರೋಲ್, ಡೀಸೆಲ್ ಬೆಲೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಬೆಲೆ ತಲುಪಿದೆ. ಇದರಿಂದ ಬಡವರು, ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ. ಸರಕಾರದ ಈ ಜನವಿರೋಧಿ ನೀತಿಗಳಿಂದ ದೇಶವಾಸಿಗಳು ತತ್ತರಿಸುವಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
2014ರ ಮಾರ್ಚ್ 1ರಂದು ಡಾಲರ್ ಎದುರು ನಮ್ಮ ರೂಪಾಯಿ ಮೌಲ್ಯವು 61.76 ಇತ್ತು. ಆದರೆ ಅದು ಇದೇ 11ರಂದು 63.9ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 63.09 ಇದ್ದ ಪೆಟ್ರೋಲ್ ದರ, ನಿತ್ಯ ಬೆಲೆ ಪರಿಷ್ಕರಣೆ ವ್ಯವಸ್ಥೆ ಜಾರಿಯಾದ ಬಳಿಕ 70.39ಕ್ಕೆ ತಲುಪಿದೆ. ಅಂದರೆ ಪೆಟ್ರೋಲ್ ಬೆಲೆಯಲ್ಲಿ ಶೇ 11.5ರಷ್ಟು ಹಾಗೂ ಡೀಸೆಲ್ 12.5 ರಷ್ಟು ಏರಿಕೆಯಾಗಿದೆ ಎಂದು ದೂರಿದರು. ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿಕೆಯಾಗಿದ್ದರೂ ಕೂಡ ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ನಿತ್ಯ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಡುವ ಮೂಲಕ ತೈಲ ಕಂಪೆನಿಗಳಿಗೆ ಪ್ರಧಾನಿಯವರು ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿ, ಅದರ ಬೆಲೆ ಇಳಿಕೆಯಾಗುವಂತೆ ಮಾಡಬೇಕು. ಜನರಿಗೆ ದಿನನಿತ್ಯ ಅವಶ್ಯವಿರುವ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು. ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡುವುದನ್ನು ಮುಂದುವರಿಸಬೇಕು. ಒಂದೊಮ್ಮೆ ಸ್ಥಗೀತಗೊಳಿಸಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಜೆಡಿಎಸ್ ಯುವ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ, ಕಾರ್ಯಾಧ್ಯಕ್ಷ ಗಜು ನಾಯ್ಕ ಅಂಕೋಲಾ, ಉಪಾಧ್ಯಕ್ಷರಾದ ಜಯರಾಮ ನಾಯ್ಕ, ರಾಘವೇಂದ್ರ ಬೈಲಪ್ಪ, ಪ್ರಧಾನ ಕಾರ್ಯದರ್ಶಿ ಲಂಬೋದರ ಗೌಡ, ಹರೀಶ ನಾಯ್ಕ, ನಿತಿನ್ ಹರಿಕಾಂತ, ದತ್ತಾ ಪಟಗಾರ ಇದ್ದರು.
Leave a Comment