ಕಾರವಾರ:
ಪ್ರತಿ ವರ್ಷದಂತೆ ಈ ವರ್ಷವೂ ಶ್ರಮದಾನ ಮೂಲಕ ಉತ್ತರ ಕನ್ನಡ ಜಿಲ್ಲಾಡಳಿತ ಗಾಂಧಿ ಜಯಂತಿ ಅಚರಿಸುತ್ತಿದ್ದು ಮಾಜಾಳಿ ಕಡಲತೀರದಲ್ಲಿ ನಡೆಯುವ ಶ್ರಮದಾನಕ್ಕೆ ಸರ್ಕಾರಿ ನೌಕರರು ಹಾಜರಾತಿ ಕಡ್ಡಾಯ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹೇಳಿದ್ದಾರೆ.
ಅಕ್ಟೋಬರ್ 2ರಂದು ಬೆಳಿಗ್ಗೆ 6.30ರಿಂದ 9ಗಂಟೆವರೆಗೆ ಮಾಜಾಳಿಯಲ್ಲಿ ನಡೆಯುವ ಶ್ರದಾನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಂಯೊಂದಿಗೆ ಕಡ್ಡಾಯವಾಗಿ ಹಾಜರಿದ್ದು ಶ್ರಮದಾನ ಮಾಡಬೇಕು. ಇದನ್ನು ಆಯಾ ಇಲಾಖೆ ಮುಖಸ್ಥರು ತಮ್ಮ ಸಿಬ್ಬಂದಿ ಹಾಜರಾತಿಯನ್ನು ನಗರ ಸಭೆ ಆಯುಕ್ತರಿಗೆ ನೀಡಬೇಕು ಎಂದರು.
ಅಂದು ಬೆಳಿಗ್ಗೆ 6.15ಕ್ಕೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹಾಗೂ ಜಿಲ್ಲಾಧಿಕಾರಿ ಕಚೆರಿಯಿಂದ ವಿಶೇಷ ಬಸ್ಗಳು ಸಂಚಾರ ಮಾಡಲಿದ್ದು ನೌಕರರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು ಆಗಮಿಸಲು ಅನುಕೂಲ ಕಲ್ಪಿಸಲಾಗಿದೆ. ಆದ್ದರಿಂದ ಸರ್ಕಾರಿ ನೌಕರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶ್ರಮದಾನ ಯಶಸ್ವಿಗೊಳಿಸಬೇಕು ಎಂದರು.
ಅಕ್ಟೋಬರ್ 2ರಂದು ಬೆಳಿಗ್ಗೆ 10ಕ್ಕೆ ಗಾಂಧಿಪಾರ್ಕ್ನಲ್ಲಿ ಸಚಿವರಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ, 10.30ಕ್ಕೆ ನಗರಸಭೆ ಮುಂಭಾಗ ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ, 11ಕ್ಕೆ ಸೋನಾರವಾಡದಲ್ಲಿ ಕಾರವಾರ ಒನ್ ಕೇಂದ್ರ ಉದ್ಘಾಟನೆ ಹಾಗೂ ಪಂಚಶಿರವಾಡದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ ಜಿಲ್ಲಾ ಸಚಿವರಿಂದ ಚಾಲನೆ ಹಾಗೂ 11.45ಕ್ಕೆ ಮಾಜಾಳಿ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಯೋಜನೆ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಅಕ್ಟೋಬರ್ 3ರಂದು ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಯಲಿದೆ. ಅಂದು ಎಲ್ಲ ಸರ್ಕಾರಿ ನೌಕರರು ತಮ್ಮ ಕಚೇರಿಗಳು ಹಾಗೂ ಶಾಲೆ ಕಾಲೇಜುಗಳನ್ನು ಸ್ವಚ್ಚಗೊಳಿಸಬೇಕು ಎಂದರು.
ಅಕ್ಟೋಬರ್ 4ರಿಂದ 7ರವರೆಗೆ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗುವುದು. ಬೆಳಿಗ್ಗೆ 6.30ರಿಂದ ಪ್ರತಿದಿನ ಕಾರವಾರ ನಗರದ ವಿವಿಧ ಮನೆಗಳಿಗೆ ತೆರಳಿ ಕಸ ವಿಂಗಡಣೆ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ವಿಠೋಬ ನಾಯ್ಕ್ ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment