ಕಾರವಾರ:
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬುಧವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕಾಳಿ ನದಿ ಉದ್ಯಾನದವರೆಗೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಇನ್ನಿತರರು ಸೈಕಲ್ ಸವಾರಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ಯೋಗೇಶ್ವರ, ಜಿಲ್ಲಾ ಪಂಚಾಯಿತಿ ಸಿಇಒ ಎಲ್.ಚಂದ್ರಶೇಖರ ನಾಯಕ ಸೈಕಲ್ ತುಳಿದರು. 180ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು. ಇದರ ಜೊತೆ ಡೋಲು, ನಗಾರಿ, ವೇಷಭೂಷಣ ತೊಟ್ಟ ಅಮದಳ್ಳಿಯ ಕಲಾವಿದರ ಕುಣಿತ ಗಮನ ಸೆಳೆದವು. ಪ್ರವಾಸೋದ್ಯಮ ದಿನದ ಸಂದೇಶಗಳನ್ನು ಸಾರುವ ಟಿ ಶರ್ಟ್ ತೊಟ್ಟು ಜಾಗೃತಿ ಮೂಡಿಸಿದರು.
ಕಾಳಿ ರಿವರ್ ಗಾರ್ಡ್ನಲ್ಲಿ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ನಕುಲ್, ಜಿಲ್ಲೆಯ ಪ್ರವಾಸಿ ತಾಣಗಳು ಮೂಲಭೂತ ಸೌಕರ್ಯಗೊಳಿಂದಿಗೆ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದೀಗ ಜಿಲ್ಲೆಯಲ್ಲಿ ವಿಶೇಷವಾಗಿ ತಯಾರಾಗುವ ಉತ್ಪನ್ನಗಳನ್ನು ಮಾರಾಟ ಮಾಡಲು ಕಾರವಾರ, ಶಿರಸಿ ಹಾಗೂ ಕುಮಟಾಗಳಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.
ವೈವಿದ್ಯತೆಯನ್ನು ಹೊಂದಿರುವ ಜಿಲ್ಲೆಯಲ್ಲಿ ಅನೇಕ ಉತ್ಪನ್ನಗಳು ಸಾಕಷ್ಟು ರಸಿದ್ದಿಯನ್ನು ಪಡೆದುಕೊಂಡಿವೆ. ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಬಂಧ ಸದ್ಯ ಕಾರವಾರದಲ್ಲಿ ಕೋಕಂ, ಶಿರಸಿಯ ಅನಾನಸುವಿನ ತಿಂಡಿ ತಿನಿಸುಗಳು, ಕುಮಟಾದ ಕಟ್ಟಿಗೆಯ ಕೆತ್ತನೆಗಳ ಮಾರಾಟಕ್ಕಾಗಿ ಮೂರು ಮಳೆಗೆಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಹದಿನೈದು ದಿನದಲ್ಲಿ ಮುರ್ಡೇಶ್ವರದಲ್ಲಿ, ಒಂದು ತಿಂಗಳ ಒಳಗೆ ಕಾರವಾರ ಹಾಗೂ ಗೋಕರ್ಣದಲ್ಲಿ ಉತ್ಪನ್ನ ಮಳಿಗೆಗಳು ತೆರೆಯಲಿವೆ. ಆ ಮೂಲಕ ಇಲ್ಲಿನ ಸಾಂಪ್ರದಾಯಿಕ ಹಾಗೂ ಮನೆ ಉತ್ಪನ್ನಗಳನ್ನು ಎಲ್ಲರಿಗೂ ಪರಿಚಯಿಸಲಾಗುತ್ತದೆಎಂದು ಹೇಳಿದರು.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಕರ್ಷಿತರಾಗುವ ಪ್ರವಾಸಿಗರಿಗೆ ಸ್ಥಳಗಳ ಪರಿಚಯ, ವೈಶಿಷ್ಠ್ಯತೆಗಳನ್ನು ಅರಿಯಲು `ಕೋ ರೋವರ್ ಕನೆಕ್ಟ್’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಕೂಡ ಬಳಕೆಗೆ ಇಂದಿನಿಂದ ನೀಡಲಾಗಿದೆ. ಮೊದಲು ಒಂದು ತಿಂಗಳು ಮುರ್ಡೇಶ್ವರದಲ್ಲಿ ಇದನ್ನು ಪ್ರಯೋಗ ಮಾಡುತ್ತಿದ್ದೇವೆ. ಅಲ್ಲದೆ ಪ್ರವಾಸಿಗರಿಗೆ ಇಲ್ಲಿನ ಕಲೆಗಳನ್ನು ಪರಿಚಯಿಸಲು ಗೋಕರ್ಣದ ಕಲಡತೀರದಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರದಂದು ಯಕ್ಷಗಾನವನ್ನು ಪ್ರದರ್ಶಿಸಲಾಗುತ್ತದೆ. ಕೆರೆಮನೆ ಹೆಗಡೆ ಅವರ ನೇತೃತ್ವದಲ್ಲಿ ಇದು ಒಂದು ತಿಂಗಳ ಕಾಲ ನಡೆಯಲಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ಹಾಗೆಯೇ ಅದನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
Leave a Comment