ಹಳಿಯಾಳ:- ಹಿಂದೂ ದೇವಾಲಯಗಳಿಗೆ ಆಡಳಿತ ಮಂಡಳಿ ನೇಮಕವನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಹಿಂದೂ ಧಾರ್ಮಿಕ ದೇವಾಲಯಗಳ ಮಹಾ ಮಂಡಳದ ಹಳಿಯಾಳ ತಾಲೂಕಾ ಘಟಕದಿಂದ ಗುರುವಾರ ಹಳಿಯಾಳದಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ :- ಕರ್ನಾಟಕ ಸರಕಾರವು ಹಿಂದೂ ಜನರ ಭಾವನೆಗಳಿಗೆ ಘಾಸಿಯಾಗುವಂತೆ ಜಿಲ್ಲೆಯ ಎಲ್ಲ ಹಿಂದೂ ದೇವಸ್ಥಾನಗಳಿಗೆ ಮೋಕ್ತೇಸರ ಮಂಡಳಿ (ಆಡಳಿತ ಮಂಡಳಿ) ನೇಮಕ ಮಾಡಲು ಮುಂದಾಗಿರುವುದು ಖಂಡನೀಯ, ಸರಕಾರವು ದೇವಸ್ಥಾನಗಳಿಗೆ ಮೋಕ್ತೇಸರ ಮಂಡಳಿ ನೇಮಕಾತಿ ವಿಷಯವನ್ನು ಕೂಡಲೇ ತಡೆಹಿಡಿಬೇಕು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಅಧಿನಿಯಮ ಕಾಯ್ದೆಯನ್ನು ಜಿಲ್ಲಾಡಳಿತ ತರಾತುರಿಯಲ್ಲಿ ಅನುಷ್ಠಾನಗೊಳಿಸುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಸರ್ಕಾರವು 2001ರಲ್ಲಿ ಧರ್ಮದಾಯ ದತ್ತಿ ಅಧಿನಿಯಮ ಜಾರಿಗೆ ತಂದಿತ್ತು ಆದರೆ ಈ ಕಾಯ್ದೆಯು ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟುಮಾಡುವ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯವು ಈ ಕಾನೂನನ್ನು ರದ್ದುಗೊಳಿಸಿದೆ ಆದರೆ 2011ರಲ್ಲಿ ಇನ್ನೊಂದು ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರದಿಂದ ಜಾರಿಗೆ ತರಲಾಯಿತು ಈ ಕಾಯ್ದೆಯನ್ನು ಉಚ್ಛನ್ಯಾಯಾಲಯದಿಂದ ರದ್ದುಗೊಂಡಾಗ ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಏಕ ಪಕ್ಷೀಯವಾಗಿ ತಡೆಯಾಜ್ಞೆಯನ್ನು ಪಡೆದಿದೆ ಎಂದು ಆರೋಪಿಸಿದ್ದು ಈ ತಡೆಯಾಜ್ಞೆಯನ್ನು ಪಡೆದ ಸಂದರ್ಭವನ್ನೇ ಬಳಸಿಕೊಂಡಿರುವ ರಾಜ್ಯ ಸರಕಾರವು ತರಾತುರಿಯಲ್ಲಿ ವೇಗವಾಗಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದನ್ನು ಖಂಡಿಸಲಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮದಾಯ ದತ್ತಿ ಅಧಿನಿಯಮ 2001ರ ವಿಷಯ ಸುಪ್ರಿಂ ಕೋರ್ಟನಲ್ಲಿ ವಿಚಾರಣಾ ಹಂತದಲ್ಲಿದ್ದರೂ ಅದನ್ನು ನಿರ್ಲಕ್ಷೀಸಿ ಜಿಲ್ಲೆಯ ಎಲ್ಲ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆಗೆ ಮುಂದಾಗಿರುವುದು ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದ್ದು ಕೂಡಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆಯದೆ ಇದ್ದರೆ ಊಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಅಲ್ಲದೇ ಮನವಿಯಲ್ಲಿ ಬೇರೆಯಾವುದೇ ಜಿಲ್ಲೆಗಳಲ್ಲಿರದ ವ್ಯವಸ್ಥಾಪನಾ ಸಮಿತಿಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ನೇಮಿಸುತ್ತಿರುವುದು ಏಕೆ? ಹಾಗೂ ಸರ್ವೊಚ್ಛ ನ್ಯಾಯಾಲಯದಲ್ಲಿ ಪ್ರಕರಣವು ಅಂತಿಮ ವಿಚಾರಣೆ ಆಗುವ ಮೊದಲೇ ದೇವಸ್ಥಾನಗಳ ಮೇಲೆ ಹತೋಟಿ ಸಾಧಿಸುವ ಹಠ ಸರ್ಕಾರಕ್ಕೆ ಏಕೆ? ಎಂದು ಪ್ರಶ್ನೀಸಿರುವ ಪ್ರತಿಭಟನಾಕಾರರು ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಜಿ. ಪಾಟನಕರ, ಮಂಗೇಶ ದೇಶಪಾಂಡೆ, ಶ್ರೀಕಾಂತ ಹೂಲಿ, ಎಮ್.ಎಚ್.ಹುರಕಡ್ಲಿ, ಸುರೇಶ ದೇಸಾಯಿ, ಜಯರಾಮ ಗಿರಿ, ಉಮೇಶ ಗಿರಿ, ಸಂತೋಷ ಹುಂಡೇಕರ, ಕಲ್ಯಾಣಿ ಯಡೋಗಿ, ಲಿಂಗರಾಜ ಹಳ್ಳಿಕೇರಿ, ತುಕಾರಾಮ ನಾಕಾಡಿ, ಜಿಡಿ ಗಂಗಾಧರ, ಶೀವು ಶೆಟ್ಟರ್, ಕಲ್ಲಪ್ಪಾ ತಿಗಡೊಳ್ಳಿ, ರುದ್ರಪ್ಪಾ ಡೇಪಿ, ತುಕಾರಾಮ ಪಾಟೀಲ, ಪುಂಡ್ಲೀಕ ನಾರ್ವೇಕರ, ಶಿವಾಜಿ ಅಂಗ್ರೋಳ್ಳಿ ಮೊದಲಾದವರು ಇದ್ದರು.
Leave a Comment