ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿಗಳು ಮತ್ತು ಉಳಿದ ತಾಲೂಕಿನ 30 ಗ್ರಾಮ ಪಂಚಾಯತಿಗಳು ಶೌಚಾಲಯವನ್ನು ನಿರ್ಮಿಸುವ ಮೂಲಕ “ಬಯಲು ಬಹಿರ್ದೆಸೆ ಗ್ರಾಮ” ಎನ್ನುವ ಪ್ರಶಸ್ತಿ ಪಡೆಯಲು ಸಿದ್ದವಾಗಿ ನಿಂತಿವೆ. ಆದರೆ ಎಲ್ಲಡೆ ಇನ್ನು ಶೌಚಾಲಯವೇ ನಿರ್ಮಾಣವಾಗಿಲ್ಲ!
ಜೋಯಿಡಾ (15 ಗ್ರಾ.ಪಂಗಳು) ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ,ಹಿಲ್ಲೂರು, ವಂದಿಗೆ, ಹಾರವಾಡ, ಅಗ್ರಗೋಣ, ಸುಂಕಸಾಳ,ಬೊಬ್ರವಾಡ) ಕುಮಟಾ ತಾಲೂಕು (ಸೊಪ್ಪಿನಹೊಸಳ್ಳಿ, ಬರ್ಗಿ, ಮೂರುರು, ಕೋಡ್ಕಣಿ, ಹಿರೆಗುತ್ತಿ, ಕಲ್ಲಬ್ಬೆ) ಹೊನ್ನಾವರ ತಾಲೂಕ (ಹೆರಂಗಡಿ, ಕಡ್ಲೆ, ಹಳದಿಪುರ, ಖರ್ವಾ, ಕೋಡಾಣಿ, ಕುದ್ರಗಿ) ಭಟ್ಕಳ ತಾಲೂಕ ( ಮಾರುಕೇರಿ, ಹಾಡುವಳ್ಳೀ,ಯಲ್ವಡಿಕವೂರ, ಮಾವಳ್ಳಿ) ಸಿದ್ದಾಪುರ ತಾಲೂಕ (ನಿಲ್ಕುಂದ, ಇಟಗಿ,ಹಸರಗೋಡ, ಹೆಗ್ಗರಣಿ, ಶಿರಳಗಿ, ತ್ಯಾಗಲಿ,ತಂಡಾಗುಂಡಿ, ಮನಮನೆ,ಬಿದ್ರಕಾನ್, ಅಣಲೆಬೈಲ್) ಮುಂಡಗೋಡ ತಾಲೂಕಿನ (ಓಣೀಕೇರಿ, ಗುಂಜಾವತಿ,ಚವಡಳ್ಳಿ,ಬಾಚಣಕಿ,ಬೆಡಸಗಾಂವ,ಮೈನಳ್ಳಿ, ಮಳಗಿ ಮತ್ತು ಪಾಳಾ) ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಶೌಚ ಗ್ರಾಮವಾಗಿವೆ. ಈ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಪಿ.ಡಿ.ಓ ಗಳು ಪ್ರಶಸ್ತಿಗಾಗಿ ಅ.2 ರಂದು ಬೆಂಗಳೂರು ತೆರಳಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳ, ಜೋಯಿಡಾ ಮತ್ತು ಯಲ್ಲಾಪುರ ತಾಲೂಕನ್ನು ಹೊರತು ಪಡಿಸಿ ಉಳಿದ ತಾಲೂಕಿನ ಪಂಚಾಯತಿಗಳಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ವಹಿಸಲಾಗಿತ್ತು.
ಸರ್ವಕುಟುಂಬ ಸಮೀಕ್ಷೆಯ ಪ್ರಕಾರ ಹಾಗೂ ಎಂ.ಐ.ಎಸ್ ದಾಖಲೆಯಲ್ಲಿರುವ ಪಂಚಾಯತಿಯಲ್ಲಿ ನೊಂದಾಯಿತ ಪ್ರತಿಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು. ಇಲ್ಲವಾದವರು ಶೌಚಾಲಯವನ್ನು ಹೊಂದಬೇಕು ಎನ್ನುವ ಮಾನದಂಡ ನೀಡಲಾಗಿತ್ತು. ಅದರಂತೆ ಜಿಲ್ಲಾಪಂಚಾಯತ ಈ ಮೇಲಿನ ಪಂಚಾಯತಗಳಲಿ ಸಂಪೂರ್ಣವಾಗಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಸರಕಾರವು ಆ ವರದಿಯ ಆಧಾರದಲ್ಲಿ ಸಂಪೂರ್ಣ ಬಯಲುಮುಕ್ತ ಶೌಚ ಗ್ರಾಮ ಎಂದು ಘೋಷಿಸಿದೆ. ಈ ಮಧ್ಯೆ ಜೋಯಿಡಾ ತಾಲೂಕಿನ ಜೋಯಿಡಾ, ಅಕೇತಿ, ನಾಗೋಡಾ, ನಂದಿಗದ್ದೆ ಮತ್ತು ರಾಮನಗರ ಮತ್ತು ಸಿರಸಿ ತಾಲೂಕಿನ ಹುಲೆಕಲ್, ಇಟಗುಳಿ, ಕೊಡ್ನಗದ್ದೆ ಹಾಗೂ ಕಾರವಾರ ತಾಲೂಕಿನ ಹಣಕೋಣ ಮತ್ತು ಘಾಡಸಾಯ ಗ್ರಾಮ ಪಂಚಾಯತಗಳಲ್ಲಿ ಶೇ.100 ಶೌಚಾಲಯಗಳಿಲ್ಲ. ಆದಾಗ್ಯೂ ಈ ಎರಡು ತಾಲೂಕು ಸಂಪೂರ್ಣ ಬಯಲು ಬಹಿರ್ದೆಸೆ ತಾಲೂಕು ಎಂದು ಜಿ.ಪಂ ಘೋಷಿಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆ ವರದಿಯ ಪ್ರಕಾರವ ಸರಕಾರವು ಘೋಷಣೆ ಮಾಡಿದೆ.
ಜೊಯಿಡಾದ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಇನ್ನೂ ಶೌಚಾಲಯಕ್ಕೆ ಗುಂಡಿ ತೆಗೆಯುವ, ಕಟ್ಟಡ ಕಟ್ಟುವ ಕಾಮಗಾರಿ ನಡೆಯುತ್ತಿದ್ದರೂ ಜಿಲ್ಲಾಪಂಚಾಯತ ಅಂತಹ ಶೌಚಾಲಯ ಪೂರ್ಣಗೊಂಡಿದೆ ಎಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ಅಲ್ಲಿಯ ಪ್ರಜ್ನಾವಂತ ನಾಗರಿಕರು ಪ್ರಶ್ನೆ ಮಾಡುವಂತಾಗಿದೆ. ಇನ್ನು ಕೆಲವು ಕುಟುಂಬಗಳಿಗೆ ಶೌಚಾಲಯವೇ ಇಲ್ಲ. ಅಂತಹ ಕುಟುಂಬಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ವಯಕ್ತಿ ಪ್ರತಿಷ್ಟೆ ಮತ್ತು ಪ್ರಶಸ್ತಿಯ ಹೆಗ್ಗಳಿಕೆ ಈ ರೀತಿಯ ತರಾತುರಿಯಲ್ಲಿ ಶೌಚಾಲಯ ನಿರ್ಮಿಸುವ ಮೊದಲೆ ಪ್ರಶಸ್ತಿ ಘೋಷಣೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಶಿರಸಿಯ ರೈತ ಶಕ್ತಿ ಪರಿಷತ್ ಈ ಬಗ್ಗೆ ಈ ಎಲ್ಲ ಗ್ರಾ.ಪಂಗಳಲಿ ಮೂರನೆ ವ್ಯಕ್ತಿಯ ತಪಾಸಣೆ ನಡೆಸುವಂತೆ ಒತ್ತಾಯಿಸಿದೆ.
ಶೌಚಾಲಯ ನಿರ್ಮಿಸುವ ಮೊದಲೆ ಜೋಯಿಡಾ ಮತ್ತು ಸಿರಸಿ ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳ ಹೆಸರನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಿರುವ ಬಗ್ಗೆ ಕೆಲವು ಅಭಿಪ್ರಯಗಳು ಅಲ್ಲಲ್ಲಿ ಕೇಳಿಬರುತ್ತಿದ್ದು, ಇನ್ನೂ ಶೌಚಾಲಯ ನಿರ್ಮಿಸಲು ಶ್ರಮಿಸುತ್ತಿರುವ ಪಂಚಾಯತಿಗಳ ಹುಬ್ಬೆರಿಸುವಂತೆ ಮಾಡಿದೆ.
Leave a Comment