ಹಳಿಯಾಳ: ರಾಜ್ಯ ಕಾಂಗ್ರೇಸ್ ಸರ್ಕಾರ ಮುಜರಾಯಿ ಇಲಾಖೆ ಹೊರತು ಪಡಿಸಿ ತಮ್ಮ ಕಾಂಗ್ರೇಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಲು
ಹಿಂದೂ ದೇವಾಲಯಗಳಿಗೆ ಆಡಳಿತ ಮಂಡಳಿ(ಮೊಕ್ತೇಸರ) ನೇಮಕ ಮಾಡಲು ಹೊರಟಿದೆ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿರುವುದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಖಡಕ್ಕ ಎಚ್ಚರಿಕೆ ನೀಡಿದರು.
ಹಳಿಯಾಳ ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ಸುನೀಲ್ ಹೆಗಡೆ ನಿವಾಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕನಾಟಕದ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮದಾಯ ದತ್ತಿ ಆಧಿನಿಯಮ 2001ರ ವಿಷಯ ಇನ್ನೂ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ರಾಜ್ಯ ಸರ್ಕಾರ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಮುಂದಾಗಿ ಹಿಂದೂ ಧರ್ಮಿಯರ ಭಾವನೆಗಳಿಗೆ ಧಕ್ಕೆ ತಂದಿದೆ ಅಲ್ಲದೇ ದೇವಸ್ಥಾನಗಳ ಪಾವಿತ್ರ್ಯತೆಯನ್ನು ನಾಶ ಮಾಡಲು ಹೊರಟ ಸರ್ಕಾರದ ಕ್ರಮವನ್ನು ಖಂಡಿಸುವುದಾಗಿ ಹೇಳಿದರು.
ಈಡಿ ಕರ್ನಾಟಕ ರಾಜ್ಯದಲ್ಲಿ ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಿನ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯ ಸರ್ಕಾರ ದೇವಸ್ಥಾನಗಳ ಆದಾಯ ಹಾಗೂ ಆಸ್ತಿಯನ್ನು ಹತೋಟಿ(ಕಬ್ಜಾ) ಮಾಡಲು ಹೊರಟಿದೆ. ಗ್ರಾಮೀಣ ಭಾಗದ ಜನ ದೇವಸ್ಥಾನಗಳ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡುತ್ತಿರುವ ಅನುದಾನವನ್ನು ತೆಗೆದು ಕೊಳ್ಳುವ ಮುನ್ನ ಪರಾಮರ್ಶಿಸಿ ತೆಗೆದು ಕೊಳ್ಳಬೇಕು ಎಂದು ಕರೆ ನೀಡಿದ ಅವರು ಮೊಕ್ತೆಸರ್ ನೇಮಕ ವಿರೋಧಿಸಿ ಸರ್ಕಾರದ ಕ್ರಮವನ್ನು ಖಂಡಿಸಿ ಸ್ವರ್ಣವಲ್ಲಿ ಶ್ರೀಗಳು ಆರಂಭಿಸಿರುವ ಹೋರಾಟಕ್ಕೆ ಬಿಜೆಪಿ ಪಕ್ಷ ಹಾಗೂ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಅಲ್ಲದೇ ಮೊಕ್ತೇಸರ್ ನೇಮಕಕ್ಕೆ ತನ್ನ ವಿರೋಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ಹೇಳಿಕೆಯನ್ನು ನೀಡುತ್ತಿದ್ದಾರೆ ಹೊರತು, ತನ್ನ ಜಿಲ್ಲೆಯಲ್ಲಿಯೇ ಸರ್ಕಾರ ಆರಂಭಿಸಿರುವ ದೇವಸ್ಥಾನಗಳ ವ್ಯವಸ್ಥಾಪನಾ ರಚನಾ ಸಮಿತಿಯ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನ ಎಲ್ಲೂ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ತಮ್ಮ ಶಾಸಕತ್ವದ ಅವದಿಯಲ್ಲಿ ಹಳಿಯಾಳ ಪಟ್ಟಣಕ್ಕೆ ಇಪ್ಪತ್ತನಾಲ್ಕು ತಾಸು ನೀರು ಪೊರೈಸುವ ಯೋಜನೆಯನ್ನು ಮಂಜೂರು ಮಾಡಿ ತಂದಿದ್ದೆ.. ಸೂರ್ಯ ಚಂದ್ರಗಳಿರುವ ತನಕ ಈ ಯೋಜನೆ ಅಸಾಧ್ಯ ಎಂದು ಟೀಕಿಸಿದ ಕಾಂಗ್ರೆಸ್ ಮುಖಂಡರು ಇಂದು ಈ ಯೋಜನೆಯ ಹೆಸರಿನಲ್ಲಿ ಹಗಲು ದರೋಡೆ ನಡೆಸಿದ್ದಾರೆ. ವಿಶ್ವ ಬ್ಯಾಂಕ ಹಣಕಾಸಿನಲ್ಲಿ ಮಂಜೂರಾಗಿರುವ ಈ ಯೋಜನೆಯ ಕೆಲಸ ಗುಣಮಟ್ಟದಲ್ಲಾಗಲಿಲ್ಲ, ನೀರಿನ ಪೈಪ್ ಜೊಡಣೆ ಸರಿಯಾಗದ ಪರಿಣಾಮ ನೀರು ಪೋಲಾಗುತ್ತಿದ್ದರೆ, ನಲ್ಲಿಗೆ ಅಳವಡಿಸಿದ ಮೀಟರ್ ಹಾಗೂ ಇನ್ನೀತರೇ ಸಾಮಗ್ರಿಗಳು ಕಳಪೆಯಾಗಿವೆ. ಪಟ್ಟಣಕ್ಕೆ ಸರಿಯಾಗಿ ನೀರು ಪೊರೈಕೆಯಾಗುತ್ತಿಲ್ಲ. ಈ ಯೋಜನೆಯ ಹೆಸರಿನಲ್ಲಿ ಪುರಸಭೆ ಹಾಗೂ ಇಲ್ಲಿನ ಕಾಂಗ್ರೆಸ್ ಜನಪ್ರತಿನಿಧಿಗಳು ನಡೆಸಿದ ಭ್ರಷ್ಟಾಚಾರದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸುವುದಲ್ಲದೇ ಊಗ್ರ ಹೋರಾಟ ಕೂಡ ನಡೆಸಲಾಗುವುದೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಎಲ್.ಎಸ್.ಅರಶಿಣಗೇರಿ, ಶ್ರೀಕಾಂತ ಹೂಲಿ, ಅನಿಲ ಮುತ್ನಾಳ, ಎಸ್.ಶೆಟವಣ್ಣನವರ, ವಿ.ಎಮ್.ಪಾಟೀಲ, ಅಪ್ಪು ಚರಂತಿಮಠ, ನಾರಾಯಣ ಬೆಳಗಾಂವಕರ, ರಾಘು ನಾಯ್ಕ, ನಾಗು ಬಾಂದೇಕರ, ವಾಸುದೇವ ಪೂಜಾರಿ ಇದ್ದರು.
Leave a Comment