ಕಾರವಾರ:
ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಿದ ಪರಿಣಾಮ ಪ್ರತಿ ತಿಂಗಳು 40 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉಳಿತಾಯವಾಗುತ್ತಿದೆ. ಪಡಿತರ ವಿತರಣೆಯಲ್ಲಾಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದರು.
ಗುರುವಾರ ಆಹಾರ ಮತ್ತು ನಾಗರಿಕ ಸರವರಾಜು ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಂತರ ಸುದ್ದಿಗೊಷ್ಟಿ ನಡೆಸಿ ಅವರು ಮಾತನಾಡಿದರು.
ಹೊಸ ಪಡಿತರ ಚೀಟಿ ಪಡೆಯಲು ಇದ್ದ ಷರತ್ತು ನಿಯಮಗಳನ್ನು ಸರಳಗೊಳಿಸಿ ಕೇವಲ 1.20 ಲಕ್ಷ ರೂ. ಮಾತ್ರ ಆದಾಯಮಿತಿಗೊಳಿಸಿದ್ದರಿಂದ ರಾಜ್ಯದ ಹೆಚ್ಚು ಬಡವರಿಗೆ ಸೌಲಭ್ಯ ಸಿಗುವಂತಾಗಿದೆ. ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಬೇಕೆಂಬುದೇ ಇದರ ಪ್ರಮುಖ ಉದ್ದೇಶ ಎಂದು ಸಚಿವರು ಹೇಳಿದರು. ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನೇರವಾಗಿ ಗ್ರಾಹಕರ ಮನೆಗೆ ಪಡಿತರ ಚೀಟಿ ಮುಟ್ಟಿಸುವ ಯೋಜನೆ ಇಡೀ ದೇಶಕ್ಕೇ ಕರ್ನಾಟಕ ಮಾದರಿಯಾಗಿದೆ ಎಂದರು. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಬಹು ಸೌಲಭ್ಯ ವಿತರಣೆಯ `ಸೇವಾ ಸಿಂಧು ಕೇಂದ್ರ’ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು. ಒಂದೇ ಸೂರಿನಲ್ಲಿ ಪಡಿತರ ವಿತರಣೆ ಜತೆಗೆ ಬಸ್, ರೈಲು ಟಿಕೆಟ್ ಮುಂಗಡ ಖಾಯ್ದಿರಿಸುವ, ವಿದ್ಯುತ್ ಮತ್ತು ದೂರವಾಣಿ ಬಿಲ್ ಪಾವತಿಸುವುದೂ ಸೇರಿದಂತೆ ವಿವಿಧ ಅನುಕೂಲಗಳನ್ನು ಕಲ್ಪಿಸುವ ಕೇಂದ್ರವಾಗಿಸುವ ಚಿಂತನೆ ಇದ್ದು ಮುಂದಿನ ಆರೇಳು ತಿಂಗಳಲ್ಲಿ ಇದು ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು.
ಈಗಾಗಲೇ ಆಹಾರ ಪಡಿತರ ವಿತರಣೆ ಸಮರ್ಪಕವಾಗಿ ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಬಯೋಮೆಟ್ರಿಕ್ಯುಕ್ತ ಪಾಸ್ ಮಷಿನ್ (ಪಾಯಿಂಟ್ ಆಫ್ ಸೇಲ್) ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇಂಟರ್ನೆಟ್ ಇರುವ ಎಲ್ಲ ಕಡೆಗಳಲ್ಲೂ ಈ ವ್ಯವಸ್ಥೆ ಕಲ್ಪಿಸಲಾಗಿದ್ದು ಇದನ್ನು ಮತ್ತು ಹಲವಾರು ಸೇವಾ ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಸುವುದು ಅದರ ಉದ್ದೇಶ. ಈ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೂ ತರಬೇತಿ ನೀಡಲಾಗುವುದು ಎಂದರು. ರಾಜ್ಯದಲ್ಲಿ ಶೇ.59.5ರಷ್ಟು ಬಯೋಮೆಟ್ರಿಕ್ ಆಗಿದ್ದು ಶೀಘ್ರವೇ ಪ್ರಕ್ರಿಯೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಮೂಲಕ ಗ್ರಾಹಕರಿಗೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳು ದೊರೆಯುವಂತೆ ಮಾಡಲಾಗಿದೆ. ಅಲ್ಲದೆ. ಕೂಲಿ ಕೆಲಸಕ್ಕೆ ಹೋಗುವ ಅಥವಾ ಇನ್ನಾವುದೇ ಕಾರಣದಿಂದ ತಮ್ಮ ನ್ಯಾಯಬೆಲೆ ಅಂಗಡಿಯಿಂದ ದೂರದಲ್ಲಿ ಹೋಗುವ ಗ್ರಾಹಕರು ಅವರ ಸಮೀಪದ ಪ್ರದೇಶದಲ್ಲೇ ತಮ್ಮ ಬಯೋಮೆಟ್ರಿಕ್ ಬಳಸಿ ಆಹಾರ ಪಡಿತರ ಪಡೆದುಕೊಳ್ಳಬಹುದು. ಅದಕ್ಕಾಗಿ ಪ್ರತಿ ಅಂಗಡಿಗಳಿಗೂ ಹೆಚ್ಚುವರಿ ಅಹಾರವನ್ನು ಸರಬರಾಜು ಮಾಡಲಾಗಿರುತ್ತದೆ ಎಂದರು.
ರಾಜ್ಯದ ಪ್ರತಿಯೊಬ್ಬ ಬಡವರಿಗೂ ಆಹಾರ ಪದಾರ್ಥಗಳು ಸಿಗಬೇಕೆಂಬುದು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ನಕಲಿ ಕಾರ್ಡುಗಳ:ನ್ನು ತಡೆಗಟ್ಟಿ ನಿಜವಾದ ಬಡವರಿಗೆ ಪಡಿತರ ಚೀಟಿಗಳನ್ನು ವಿತರಿಸುವ ಉದ್ದೇಶದಿಂದ ಜಾರಿಗೆ ತರಲಾದ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಯಶಸ್ವಿಯಾಗಿದ್ದು ರಾಜ್ಯಾದ್ಯಂತ 16.50 ಲಕ್ಷ ಅರ್ಜಿಗಳು ಮಾನ್ಯವಾಗಿವೆ. ಈ ಪೈಕಿ ಈಗಾಗಲೇ 3 ಲಕ್ಷ ಅರ್ಜಿದಾರರ ಮನೆಗೆ ಪಡಿತರ ಚೀಟಿಗಳು ಅಂಚೆ ಮೂಲಕ ತಲುಪಿವೆ. ಅತಿ ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಅರ್ಜಿದಾರರ ಮನೆಗೆ ಪಡಿತರ ಚೀಟಿಗಳು ತಲುಪಲಿವೆ ಎಂದರು.
ಹೊಸದಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದ ಸಂಬಂಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 23516 ಅರ್ಜಿಗಳು ಬಂದಿದ್ದು ಅಷ್ಟೂ ಅರ್ಜಿಗಳನ್ನು ಪರಿಶೀಲಿಸಿ ಈಗಾಗಲೇ ಪಡಿತರ ಚೀಟಿಗಳ ಮುದ್ರಣಕ್ಕೆ ಕಳಿಸಲಾಗಿದೆ. ಈ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಇದ್ದವರಿಗೂ ಸೀಮೆಎಣ್ಣಿ ಬೇಡಿಕೆ ಇರುವುದನ್ನು ಸರ್ಕಾರ ಪರಿಗಣಿಸಿದ್ದು ಅಡುಗೆ ಅನಿಲ ಸಂಪರ್ಕ ಇದ್ದರೂ ಸೀಮೆಎಣ್ಣೆ ವಿತರಿಸುವ ಯೋಜನೆಯನ್ನು ಜಾರಿಗೆ ತಂದಿದೆ. ಬೇಡಿಕೆ ಇರುವವರು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ ಈ ಸಂಬಂಧಿಸಿದಂತೆ ಅರ್ಜಿ ನೀಡಿ ಸ್ಥಳೀಯ ಇಲಾಖೆ ಉಪ ನಿರ್ದೇಶಕರ ಮೂಲಕ ಮಂಜೂರಾತಿ ಪಡೆಯಬಹುದಾಗಿದೆ. ಅಲ್ಲದೆ ಪುನರ್ ಬೆಳಕು ಎಂಬ ಹೊಸ ಯೋಜನೆಯನ್ನು ಜಾರಿ ತರಲಾಗುತ್ತಿದ್ದು ಸೀಮೆ ಎಣ್ಣೆ ಅಗತ್ಯವಿಲ್ಲದವರಿಗೆ ಎರಡು ಪುನರ್ ಬಳಸಬಹುದಾದ ಎಲ್ಇಡಿ ಬಲ್ಬ್ಗಳನ್ನು ಈ ಯೋಜನೆಯಲ್ಲಿ ವಿತರಿಸಲಾಗುವುದು. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ 1750 ಅರ್ಜಿಗಳು ಬಂದಿವೆ ಎಂದರು.
ದಾಸೋಹ ಕಾರ್ಯಕ್ರಮದಲ್ಲಿ ವೃದ್ಧಾಶ್ರಮ ಮತ್ತು ಆನಾಥಾಶ್ರಮ ಸೇರಿದಂತೆ ವಿವಿಧ ಸಮಾಜ ಸೇವಾ ಸಂಸ್ಥೆಗಳಿಗೆ ಆಹಾರ ಪದಾರ್ಥಗಳ ಬೇಡಿಕೆ ಇದ್ದಲ್ಲಿ ಪ್ರತಿ ವ್ಯಕ್ತಿಗೆ ತಲಾ 12 ಕೆಜಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ. ಇದನ್ನೂ ಆಯಾ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆಯಬಹುದಾಗಿದೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 10 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ ಎಂದು ಸಚಿವರು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸರ್ಕಾರ ಸಾರ್ವಜನಿಕರ ಆಹಾರ ಭದ್ರತೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಇಲಾಖೆಗೆ ಕಾಯಕಲ್ಪ ತರುವಲ್ಲಿ ಹೊಸ ಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಸಚಿವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಲಾಖೆ ಉಪ ನಿರ್ದೇಶಕ ರಘುನಾಥ್ ಉಪಸ್ಥಿತರಿದ್ದರು.
Leave a Comment