ಕಾರವಾರ:
ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರ ರೂಪಿಸಲು ಉದ್ದೇಶಿಸಿರುವ `ವಿಷನ್ 2025 ಡಾಕ್ಯುಮೆಂಟ್’ ಮಾಹಿತಿ ಸಂಗ್ರಹ ಕಾರ್ಯಾಗಾರ ಅ.17ರಂದು ಕಾರವಾರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಶನಿವಾರ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಷನ್ 2025 ಡಾಕ್ಯುಮೆಂಟ್ ಯೋಜನೆ ಮುಖ್ಯ ಕಾರ್ಯನಿರ್ವಣಾಧಿಕಾರಿಯೂ ಆಗಿರುವ ರೇಣುಕಾ ಚಿದಂಬರಂ ನೇತೃತ್ವದ ತಂಡ ಜಿಲ್ಲೆಗೆ ಆಗಮಿಸಲಿದೆ ಎಂದರು.
ಸರ್ಕಾರದ ಪ್ರಮುಖ ಇಲಾಖೆಗಳನ್ನೊಳಗೊಂಡ 13 ವಲಯಗಳನ್ನು ಗುರುತಿಸಲಾಗಿದ್ದು ಅವುಗಳನ್ನು 5 ಸಮಾನಾಂತರ ವಿಷಯಗಳ ವರ್ಗಗಳಾಗಿ ವಿಂಗಡಿಸಲಾಗಿದೆ. 1. ನಗರ ಮೂಲಸೌಲಭ್ಯಾಭಿವೃದ್ಧಿ, ಸ್ಮಾರ್ಟ್ಸಿಟಿ, 2. ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ, 3. ಕೃಷಿ ಮತ್ತು ಅಲೈಡ್, ಗ್ರಾಮೀಣಾಭಿವೃದ್ಧಿ, 4. ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ 5. ಆಡಳಿತ, ಕಾನೂನು ಮತ್ತು ನ್ಯಾಯ. ಹೀಗೆ 5 ಸಮಾನಾಂತರ ವಿಷಯಗಳ ತಲಾ 20 ವಿಷಯತಜ್ಞರ ಗುಂಪುಗಳನ್ನು ರಚಿಸಿ ಆ ಗುಂಪುಗಳ ಆಂತರಿಕ ಚರ್ಚೆ ಬಳಿಕ ಪ್ರತಿ ಗುಂಪಿನಿಂದ ಆಯ್ದ ಒಬ್ಬ ಸದಸ್ಯರು ಮುನ್ನೋಟ ಮತ್ತು ಅಪೇಕ್ಷಿತ ಫಲಿತಾಂಶವನ್ನು ತಂಡದ ಮುಂದೆ ಪ್ರಸ್ತುತಪಡಿಸಲಿದೆ. ನಂತರ ಎಲ್ಲ ಗುಂಪುಗಳ ಅಂಶಗಳನ್ನು ಸಂಗ್ರಹಿಸುವ ತಂಡ ಅಂತಿಮವಾಗಿ ವಿಷನ್ 2025 ಡಾಕ್ಯುಮೆಂಟ್ನಲ್ಲಿ ಅಳವಡಿಸಲಿದೆ ಎಂದು ಅವರು ಕಾರ್ಯಕ್ರಮ ಕುರಿತು ಸಭೆಯಲ್ಲಿ ವಿವರಿಸಿದರು.
ಈ ಕಾರ್ಯಕ್ರಮ ರಾಜ್ಯದ ಅಭಿವೃದ್ಧಿ ಮುನ್ನೋಟದ ಹಿನ್ನೆಲೆಯಲ್ಲಿ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿರುವುದರಿಂದ ಪ್ರತಿ ಇಲಾಖಾವಾರು ವಿಷಯ ತಜ್ಞರ ಪಟ್ಟಿಯನ್ನು ಆಯಾ ಇಲಾಖೆ ಮುಖ್ಯಸ್ಥರು ಅಂತಿಮಗೊಳಿಸಿ ಕಾರ್ಯಕ್ರಮಕ್ಕೆ ಕರೆತರಬೇಕು. ಅಲ್ಲದೆ, ವಿವಿಧ ಇಲಾಖೆಗಳ ಕುರಿತು ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಸೂಚಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment