ಕಾರವಾರ:
ಆಧುನಿಕ ಉಪಕರಣಗಳಿಂದಾಗಿ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಮಧ್ಯಸ್ಥಿಕೆ ಮತ್ತು ಜನತಾ ನ್ಯಾಯಾಲಯಗಳ ಕುರಿತು ಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಈ ಹಿಂದೆ ಒಂದು ಕುಟುಂಬ ಎಂದರೆ ಹತ್ತಾರು ಜನರಿರುತಿದ್ದರು. ಉದ್ಯೋಗ, ಶಿಕ್ಷಣ ಅಥವಾ ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಕುಟುಂಬ ಎಂದರೆ ಗಂಡ, ಹೆಂಡತಿ, ಮಕ್ಕಳು ಮಾತ್ರ ಎಂಬಂತಾಗಿದೆ. ಆದರೆ ಇಂತಹ ಕುಟುಂಬ ವಿಭಜನೆಯಿಂದ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗಿದೆ. ಗಂಡ ಹೆಡಂತಿ ನಡುವಿನ ಸಣ್ಣ ಪುಟ್ಟ ವಿಷಯಗಳು ವಿಚ್ಚೇಧನಕ್ಕೆ ಕಾರಣವಾಗುತ್ತಿವೆ. ಆದರೆ ಇದನ್ನು ಬಗೆಹರಿಸಿಕೊಳ್ಳುವಲ್ಲಿ ಸಂಬಂಧಪಟ್ಟವರು ಸಣ್ಣ ಯೋಚನೆಗಳನ್ನು ಮಾಡದಿರುವುದು ದುರದೃಷ್ಟಕರ ಎಂದು ಹೇಳಿದರು.
ಆಧುನಿಕ ಉಪಕರಣಗಳಾದ ಟಿವಿ, ಮೊಬೈಲ್, ಕಂಪ್ಯೂಟರ್ಗಳು ಹಿರಿಯ ನಾಗರಿಕರನ್ನು ದೂರ ಇಡುವಲ್ಲಿ ಕಾರಣವಾಗುತ್ತಿವೆ. ಮನೆಯಲ್ಲಿರುವ ಹಿರಿಯ ನಾಗರಿಕರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಬೇಕೆಂದರೆ ಈ ಆಧುನಿಕ ಮಾಧ್ಯಮಗಳು ಮನೆಯರಿಂದ ಪ್ರತ್ಯೇಕಿಸುತ್ತಿವೆ. ಆದರೆ ಇದೆಲ್ಲವನ್ನು ಮೆಟ್ಟಿನಿಲ್ಲಲು ಹಲವು ಸಂಘ ಸಂಸ್ಥೆಗಳು ಒಂದೇಡೆ ಸೇರಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ವಿಚಾರಿಸಲು ಸಹಕಾರ ನೀಡುತ್ತಿವೆ. ಅಲ್ಲದೆ ಮೊದಲಿನಂತೆ ಹಿರಿಯ ನಾಗರಿಕರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಾಯಿಸದೆ ವಿಶೇಷ ಪ್ರಕರಣ ಎಂದು ಗುರುತಿಸಿ ಆದಷ್ಟು ಬೇಗ ಇತ್ಯ ರ್ಥಪಡಿಸಲಾಗುತ್ತಿದೆ. ನ್ಯಾಯಾಲಯಗಳಲ್ಲಿಯೂ ಕೂಡ ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ವಿಶೇಷ ಸೌಲತ್ತುಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, `50 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸಿ, ಅವರಿಗೆ ಗುರುತಿನ ಚೀಟಿ ನೀಡುವಂತಾಗಬೇಕು. 60 ವರ್ಷದ ಬಳಿಕ ಇನ್ನೊಬ್ಬರ ಸಹಾಯ ಪಡೆದು ತಿರುಗಾಡುವ ಪರಿಸ್ಥಿತಿಯಲ್ಲಿರುತ್ತಾರೆ. ಹೀಗಾಗಿ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳಲು, ಅದನ್ನು ಅನುಭವಿಸಲು ಸಾಧ್ಯವಾಗಿರುವುದಿಲ್ಲ. 50 ವರ್ಷಕ್ಕೆ ಹಿರಿಯ ನಾಗರಿಕರು ಎಂದು ಗುರುತಿಸಿಕೊಳ್ಳುವುದರಿಂದ ಎಲ್ಲ ಸೌಲಭ್ಯಗಳನ್ನು ಯಾರ ಸಹಾಯವಿಲ್ಲದೆ ಪಡೆದುಕೊಳ್ಳಬಹುದು. ಜತೆಗೆ ಸ್ಥಳೀಯ ಸಾರಿಗೆ, ಸಂಸ್ಥೆಗಳಲ್ಲಿಯೂ ಇವರಿಗಾಗಿ ರಿಯಾಯಿತಿ, ವಿಶೇಷ ಸೌಲಭ್ಯಗಳು ಸಿಗುವಂತಾಗಬೇಕು’ ಎಂದು ಹೇಳಿದರು.
ಹಿರಿಯ ನಾಗರಿಕ ಮತ್ತು ವಿಕಲಚೇತನ ಸಬಲೀಕರಣ ಜಿಲ್ಲಾ ಅಧಿಕಾರಿ ಗಂಗಪ್ಪ, ಹಿರಿಯ ವಕೀಲ ಆರ್.ವಿ.ಭಟ್ಟ, ಬೆಳಗಾವಿಯ ಮಲ್ಲಿಕಾರ್ಜುನ ಜನಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖೋತ ಉಪಸ್ಥಿತರಿದ್ದರು.
Leave a Comment