ಕಾರವಾರ: ಅಕ್ರಮ ಮದ್ಯ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ವಿವಿಧ ಭಾಗದಲ್ಲಿ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯುವುದರ ಜೊತೆಗೆ ಸಾಗಾಟಕ್ಕೆ ಬಳಸಲಾಗುವ ದ್ವಿಚಕ್ರ ಹಿಡಿದ ಭಾರೀ ವಾಹನಗಳು ಈಗ ಇಲಾಖೆ ಆವರಣದಲ್ಲಿಯೇ ನಿಂತು ಗುಜರಿಗೆ ಹಾಕುವ ಸ್ಥಿತಿಗೆ ತಲುಪಿದೆ. ಆದರೆ, ವಾಹನಗಳ ಹರಾಜು ಹಾಕುವ ಸಂದರ್ಭದಲ್ಲೂ ಆರ್ಟಿಓ ಅಧಿಕಾರಿಗಳ ಅವೈಜ್ಞಾನಿಕ ಮೌಲ್ಯಮಾಪನದಿಂದಾಗಿ ಖರೀದಿಗೆ ಯಾರು ಮುಂದೆ ಬರುತ್ತಿಲ್ಲ!
ಗೋವಾ ಗಡಿ, ಕಾರವಾ ಅಂಕೋಲಾ ವ್ಯಾಪ್ತಿಯಲ್ಲಿ ಅನಮೋಡ ಚೆಕ್ ಪೋಸ್ಟ್ ಸೇರಿದಂತೆ ಜಿಲ್ಲೆಯ ಇತರ ಭಾಗದಲ್ಲಿ ಕಳೆದ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಅಬಕಾರಿ ಇಲಾಖೆ ಸುಮಾರು 100ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇವುಗಳ ಪೈಕಿ ಈಗ ಸುಮಾರು 80 ವಾಹನಗಳು ಅಬಕಾರಿ ಇಲಾಖೆ ಆವರಣದಲ್ಲಿ ಹೆಚ್ಚಿನ ವಾಹನಗಳು ಮಳೆ ಹಾಗೂ ಉಪ್ಪು ನೀರಿನ ಹವೆಗೆ ಸಿಲುಕಿ ಸಂಪೂರ್ಣವಾಗಿ ತುಕ್ಕು ಹಿಡಿದು ಗುಜರಿಗೆ ಹಾಕುವ ಹಂತಕ್ಕೆ ತಲುಪಿ ಹಾಳಾಗುತ್ತಿದೆ. ಅಬಕಾರಿ ಅಧಿಕಾರಿಗಳ ವಾಹನ ವಶಕ್ಕೆ ತೆಗೆದುಕೊಂಡ ಬಳಿಕ ವಾಹನ ಮಾಲೀಕರು ದಂಡವನ್ನು ಕಟ್ಟಿ ವಾಹನಗಳನ್ನು ಬಿಡಿಸಿಕೊಳ್ಳಬೇಕು. ಆದರೆ ಹೆಚ್ಚಿನ ವಾಹನ ಮಾಲೀಕರು ಮುಂದೆ ಬಂದಿಲ್ಲ. ಅಲ್ಲದೆ ಅಬಕಾರಿ ಇಲಾಖೆಯವರು ಈ ಎಲ್ಲ ವಾಹನಗಳನ್ನು ಹರಾಜು ಹಾಕಿಲ್ಲ. ಸದ್ಯದ ಮಟ್ಟಿಗೆ ಇಲಾಖೆ ಆವರಣದಲ್ಲಿ ಸುಮಾರು 40 ಬೈಕ್, ಲಾರಿ, ಕಾರು ಸೇರಿದಂತೆ ವಿವಿಧ ವಾಹನಗಳಿವೆ. ಅಷ್ಟೇ ಅಲ್ಲದೆ ಮೂರು ನಾಡ ದೋಣಿ, ನಾಲ್ಕು ಎಂಜಿನ್ ಸಹ ಇದೆ.
ಮದ್ಯ ಸಾಗಾಟದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡ ಅನೇಕ ವಾಹನಗಳನ್ನು ಮಾಲೀಕರು ಬಿಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಯಾರು ಬರದ ಪಕ್ಷದಲ್ಲಿ ವಶಕ್ಕೆ ತೆಗೆದುಕೊಂಡು ಎಫ್ಐಆರ್ ದಾಖಲಾದ ಮೇಲೆ ಅಬಕಾರಿ ಇಲಾಖೆಯಿಂದ ಆರ್ಟಿಓ ಅಧಿಕಾರಿಗಳಿಂದ ವಾಹದ ಮೌಲ್ಯಮಾಪನ ಪಡೆಯಲಾಗುತ್ತದೆ. ಮಾಲೀಕರು ವಾಹನ ಬಿಡಿಸಿಕೊಳ್ಳಬೇಕಾದರೆ ಆರ್ಟಿಓ ಮೌಲ್ಯಮಾಪನ ಮಾಡಿದಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ಅಬಕಾರಿ ಇಲಾಖೆಗೆ ನೀಡಬೇಕು. ವಾಹನ ಬಿಡಿಸಿಕೊಂಡ ಮೇಲೆ ಅಬಕಾರಿ ಇಲಾಖೆಯ ಪರವಾನಗಿ ಪಡೆಯುವ ಪೂರ್ವದಲ್ಲಿ ರಿಪೇರಿಗೆ ಅಥವಾ ಇನ್ಯಾವುದೇ ರಾಜ್ಯಕ್ಕೆ ಒಯ್ಯುವಂತಿಲ್ಲ. ಇದರಿಂದಾಗಿ ಹೆಚ್ಚಿನ ಜನರು ವಾಹನ ಬಿಡಿಸಿಕೊಳ್ಳಲು ಮುಂದಾಗುತ್ತಿಲ್ಲ.
ಕಳೆದ ಅನೇಕ ವರ್ಷಗಳಿಂದ ಅಬಕಾರಿ ಇಲಾಖೆಯ ವಶದಲ್ಲಿರುವ ವಿವಿಧ ವಾಹನವಿಗ ಸಂಪೂರ್ಣ ಗುಜರಿಯಾಗಿವೆ. ನಿಯಮದ ಪ್ರಕಾರ ವಾಹನ ಬಿಡಿಸಿಕೊಳ್ಳಲು ಮಾಲೀಕರು ಮುಂದೆ ಬರದಿದ್ದರೇ ಹರಾಜು ಪ್ರಕ್ರಿಯೆಯ ಜಾಹೀರಾತು ನೀಡಲಾಗುತ್ತಿದೆ. ಅಲ್ಲದೆ ಇಲಾಖೆಯ ನೋಟಿಸ್ ಬೋರ್ಡಿಗೂ ಹಾಕಲಾಗುತ್ತದೆ. ಕಳೆದ ಎರಡು ದಿನಗಳ ಹಿಂದೆ ಅಬಕಾರಿ ಇಲಾಖೆ ಗುಜರಿ ಹಂತಕ್ಕೆ ತಲುಪಿದ ಲಾರಿ, ಕಾರು ಹಾಗೂ ಬೈಕ್ಗಳು ಸೇರಿ ಒಟ್ಟು 22 ವಾಹನಗಳ ಹರಾಜು ಕರೆದಿತ್ತು. ಆದರೆ ಒಟ್ಟೂ 12 ವಾಹನಗಳ ಮೌಲ್ಯ ಮಾಪನ ಆರ್ಟಿಓ ಅಧಿಕಾರಿಗಳು 3ತಿಂಗಳ ಹಿಂದೆ ಅಬಕಾರಿ ಇಲಾಖೆಯವರಿಗೆ ನೀಡಿದ್ದರಿಂದ ಅಷ್ಟೇ ವಾಹನಗಳ ಹರಾಜಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜನರು ಆಗಮಿಸಿದ್ದರಾದರೂ ಹರಾಜಿಗಿಟ್ಟ ವಾಹನಗಳ ಮೌಲ್ಯಮಾಪನವನ್ನು ಆರ್ಟಿಒ ಅಧಿಕಾರಿಗಳು ಅವೈಜ್ಞಾನಿಕವಾಗಿ ಮಾಡಿದ್ದರಿಂದ ಹರಾಜು ಪ್ರಕ್ರಿಯೆಯಲ್ಲಿ ಯಾರು ವಾಹನ ಖರೀದಿಗೆ ಮುಂದಾಗಿಲ್ಲ.
ಕೊಂಚ ಸುಸ್ಥಿತಿಯಲ್ಲಿರುವ ಬೈಕ್ ಹಾಗೂ ಕಾರುಗಳ ಮೌಲ್ಯವೂ ಅಧಿಕವಾಗಿದ್ದರಿಂದ ಎಲ್ಲ ವಾಹನಗಳು ಅಬಕಾರಿ ಇಲಾಖೆಯ ಆವರಣದಲ್ಲೇ ಮತ್ತಷ್ಟು ಗುಜರಿಯಾಗಲು ತಯಾಗುತ್ತಿದೆ. ಹರಾಜಿನಲ್ಲಿ ವಾಹನ ಖರೀದಿ ಮಾಡಿದರೆ ಅವುಗಳ ರಿಪೇರಿ, ಆರ್ಟಿಓ ಶುಲ್ಕ, ಜಿಎಸ್ಟಿ ಶುಲ್ಕ ಸೇರಿ ಉತ್ತಮವಾಗಿರುವ ವಾಹನಗಳನ್ನು ಖರೀದಿ ಮಾಡಬಹುದು. ಹರಾಜಿಗೆ ತೆಗೆದ ವಾಹನ ಮೂರು ಪಟ್ಟು ಹೆಚ್ಚಿಗೆ ಮೌಲ್ಯದ್ದಾಗಿದ್ದು ಅವೈಜ್ಞಾನಿಕವಾಗಿ ಆರ್ಟಿಓ ಮೌಲ್ಯಮಾಪನ ಮಾಡಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.
*****************************
ಜಿಎಸ್ಟಿ ಬಿಸಿ:
ಹರಾಜಿನಲ್ಲಿ ಉತ್ತಮ ಸ್ಥಿತಿಯಲ್ಲಿರುವ ವಾಹನ ಅಥವಾ ಗುಜರಿನಗೆ ಹಾಕುವಂಥ ವಾಹನ ಖರೀದಿ ಮಾಡಿದರೂ ಸರಕಾರಕ್ಕೆ ಜಿಎಸ್ಟಿ ಕಡ್ಡಾಯವಾಗಿ ಕಟ್ಟಲೇಬೇಕು. ಹರಾಜಾದ ಮೌಲ್ಯಕ್ಕೆ ತಕ್ಕಂತೆ ಉತ್ತಮ ಸ್ಥಿತಿಯಲ್ಲಿರುವ ವಾಹನಗಳಿಗೆ ಶೇ.28ರಷ್ಟು ಹಾಗೂ ಗುಜರಿಗೆ ಹಾಕುವ ವಾಹನಗಳಿಗೂ ಶೇ.18ರಷ್ಟು ಜಿಎಸ್ಟಿ ಸರಕಾರ ನಿಗದಿಪಡಿಸಿದೆ. ಇದು ಸಹ ಹರಾಜಿನಲ್ಲಿ ಪಾಲ್ಗೊಂಡು ವಾಹನ ಖರೀದಿ ಮಾಡುವವರಿಗೆ ಜಿಎಸ್ಟಿ ಬಿಸಿ ಮುಟ್ಟಿದೆ. ಈ ಕಾರಣಕ್ಕೂ ಹೆಚ್ಚಿನವರು ವಾಹನ ಖರೀದಿಗೆ ಮುಂದಾಗುತ್ತಿಲ್ಲ.
Leave a Comment