ಕಾರವಾರ: ನಕಲಿ ಬಂಗಾರವನ್ನು ಅಸಲಿ ಎಂದು ಪ್ರಮಾಣಿಕರಿಸಿ ಮಲ್ಲಾಪುರ ಬ್ಯಾಂಕಿಗೆ 68.15 ಲಕ್ಷ ರೂ. ಪಂಗನಾಮ ಹಾಕಿದ್ದ ರಾಜಕುಮಾರ್ ಶೇಟ್, ಕದ್ರಾದ ಎಸ್ಬಿಐ ಬ್ಯಾಂಕಿನ ಶಾಖೆಯಲ್ಲೂ 25.21 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕದ್ರಾದ ಬ್ಯಾಂಕಿನಲ್ಲಿ ಚಿನ್ನದ ಪರಿಶೀಲನೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಟ್ಟೂ 11 ಆರೋಪಿಗಳು ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದಾರೆ. ಗ್ರಾಹಕರು ಬ್ಯಾಂಕಿಗೆ ವಂಚಿಸಲು ತಂದಿದ್ದ ನಕಲಿ ಬಂಗಾರವನ್ನು ಅಸಲಿ ಎಂದು ದೃಢಪಡಿಸುತ್ತಿದ್ದ ರಾಜಕುಮಾರ್ ಶೇಟ್ ತಲೆ ಮರಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಮಲ್ಲಾಪುರದ ನಿವಾಸಿ ರಾಜಕುಮಾರ್ ಶೇಟ್ ಮಲ್ಲಾಪುರದ ಸಿಂಡಿಕೇಟ್ ಬ್ಯಾಂಕ್ ಹಾಗೂ ಕದ್ರಾದ ಎಸ್ಬಿಐ ಶಾಖೆಯಲ್ಲಿ ಚಿನ್ನಾಭರದ ಪರೀಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡು ಎರಡು ಬ್ಯಾಂಕುಗಳಿಗೆ ಕೋಟ್ಯಾಂತರ ರೂ. ಪಂಗನಾಮ ಹಾಕಿದ ಬಗ್ಗೆ ದೂರು ದಾಖಲಾಗಿದೆ.
ಅನೇಕ ಜನರಿಗೆ ನಕಲಿ ಚಿನ್ನ ತರುವಂತೆ ಬ್ಯಾಂಕಿನಲ್ಲಿ ಚಿನ್ನದ ಪರೀಕ್ಷಕನಾಗಿದ್ದ ರಾಜಕುಮಾರ್ ಶೇಟ್ ಹೇಳುತ್ತಿದ್ದ. ತಂದ ಬಂಗಾರವನ್ನು ಅಸಲಿ ಎಂದು ದೃಢಪಡಿಸಿ, ಜನ ಪಡೆದ ಸಾಲದಿಂದ ಪಾಲು ಪಡೆಯುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಅದರಂತೆ ಮಲ್ಲಾಪುರದ ಸಿಂಡಿಕೇಟ್ ಬ್ಯಾಂಕಿಗೆ ಒಟ್ಟೂ 63 ಖಾತೆ ಹೊಂದಿದ 33 ಗ್ರಾಹಕರು ನಕಲಿ ಚಿನ್ನವನ್ನು ಅಡವಿಟ್ಟು 68.15ಲಕ್ಷ ರೂ. ಪಂಗನಾಮ ಹಾಕಲಾಗಿದೆ. ಈಗ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ 11 ಜನ ಆರೋಪಿಗಳು ನಕಲಿ ಚಿನ್ನವನ್ನು ಕದ್ರಾದ ಎಸ್ಬಿಐ ಶಾಖೆಯಲ್ಲಿ ಅಡವಿಟ್ಟು 25.21 ಲಕ್ಷ ರೂ. ಸಾಲ ಪಡೆದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಗೌತಮ್ಕುಮಾರ್ ದಾಸ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಕದ್ರಾ ಹಾಗೂ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment