ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರಥಮ ಭಾರಿಗೆ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಮೈಸೂರಿನಲ್ಲಿ ನವೆಂಬರ 15 ಮತ್ತು 16 ರಂದು ಎರಡು ದಿನಗಳ ಕಾಲ ‘ವಿಜ್ಞಾನ ತಂತ್ರಜ್ಞಾನ ಮತ್ತು ಸಮಾಜ’ ಎಂಬ ವಿಷಯದ ಮೇಲೆ ಆಯೋಜಿಸುತ್ತಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಮೇಲೆ ವಿದ್ವತ್ಪೂರ್ಣ ಉಪನ್ಯಾಸಗಳನ್ನು ಕನ್ನಡದಲ್ಲಿ ಹೆಸರಾಂತ ವೈಜ್ಞಾನಿಕ ಸಂಸ್ಥೆಗಳ ವಿಶೇಷ ಪರಿಣಿತ ಸಂಪನ್ಮೂಲ ತಜ್ಞರಿಂದ ಆಯೋಜಿಸಲಾಗಿದ್ದು, 600 ಪ್ರತಿನಿಧಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮೂಲ ಮತ್ತು ಅನ್ವಯಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋದನಾ ಪ್ರಾತ್ಯಕ್ಷೆತೆಗಳನ್ನು ಕನ್ನಡದಲ್ಲಿ ಮಂಡಿಸಲು ಯುವ ವಿಜ್ಞಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ, ಆಸಕ್ತರು ಅರ್ಜಿಗಳನ್ನು ನವ್ಹೆಂಬರ 4 ಒಳಗಾಗಿ ಇಲಾಖೆಯ ಇ-ಮೇಲ್ [email protected] ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ವೈಜ್ಞಾನಿಕ ಅಧಿಕಾರಿ (9845258894)ಯನ್ನು ಸಂಪರ್ಕಿಸಬಹುದು.
ಜೀವಮಾನ ಸಾಧನೆ ಪ್ರಶಸ್ತಿ : ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಅನನ್ಯ ಕೊಡುಗೆ ನೀಡಿರುವ ಖ್ಯಾತ ವಿಜ್ಞಾನ ಲೇಖಕರಾದ ಪ್ರೋ. ಜೆ.ಆರ್. ಲಕ್ಷ್ಮಣರಾವ್ ಅವರನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು “ಜೀವಮಾನ ಸಾಧನೆ” ಪ್ರಶಸ್ತಿಗೆ ಆಯ್ಕೆ ಮಾಡಿದೆ. ನವ್ಹಂಬರ 15 ರಂದು ನಡೆಯುವ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳ ಸಂದರ್ಭದಲ್ಲಿ ಬಹುಮಾನವಾಗಿ ನಗದು ಮತ್ತು ಸನ್ಮಾನವನ್ನು ಏರ್ಪಡಿಸಲಾಗುತ್ತಿದೆ ಎಂದು ಅಕಾಡೆಮಿಯ ಹಿರಿಯ ವೈಜ್ಞಾನಿಕಾಧಿಕಾರಿ ಡಾ.ಎಮ್.ರಮೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment