ಕಾರವಾರ: ಡಿಫೆನ್ಸ್ ಎಸ್ಟೇಟ್ ಆಫೀಸರ್ ಕಚೇರಿಯನ್ನು ಬೆಂಗಳೂರಿನಿಂದ ಕಾರವಾರಕ್ಕೆ ವರ್ಗಾಯಿಸುವ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗುವದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಡಿಫೆನ್ಸ್ ಎಸ್ಟೇಟ್ ಆಫೀಸರ್ ಕಚೇರಿ ತೆರೆಯುವ ಬಗ್ಗೆ ಪ್ರಸ್ತಾಪವಾಗಿದೆ. ಇಲ್ಲಿನ ಸೀಬರ್ಡ್ ನಿರಾಶ್ರೀತರಿಗೆ ಪರಿಹಾರ ವಿತರಿಸಲು ಹೆಚ್ಚು ಸಹಕಾರಿಯಾಗಲಿದೆ. ಈಗಾಗಲೇ ಕೇಂದ್ರ ರಕ್ಷಣಾ ಸಚಿವರ ಆಪ್ತ ಸಹಾಯಕರೊಂದಿಗೆ ಮಾತನಾಡಿದ್ದು, ಸಚಿವರು ನಮ್ಮ ಮನವಿಯನ್ನು ಪರಿಗಣಿಸುವ ಭರವಸೆ ಇದೆ ಎಂದು ಹೇಳಿದರು. ಲ್ಯಾಂಡ್ ಆರ್ಮಿಯವರು ಜಿಲ್ಲೆಯಲ್ಲಿ ನೂರಾರು ಕಾಮಗಾರಿಗಳ ಕೈಗೆತ್ತಿಕೊಂಡಿದ್ದು, ಒಂದನ್ನು ಪೂರ್ಣಗೊಳಿಸಿಲ್ಲ ಎಂದು ಮಾಧ್ಯಮದವರು ತಿಳಿಸಿದಾಗ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಮುಖ್ಯವಾಗಿ ಸೂಕ್ತ ಸಮಯದಲ್ಲಿ ಹಣಕಾಸಿನ ಅಲಭ್ಯತೆ, ಯೋಜನೆಯಲ್ಲಿನ ನಿಗದಿತ ವೆಚ್ಚದಲ್ಲಿ ಏರಿಕೆ, ತಡವಾಗಿ ಹಣಕಾಸಿನ ಬಿಡುಗಡೆ ಹೀಗೆ ಹತ್ತು ಹಲವು ಕಾರಣಗಳಿರಬಹುದು ಎಂದು ಹೇಳಿದರು.
ಸಾಗರಮಾಲಾ ಯೋಜನೆಯಡಿ ತದಡಿ ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರ ಹಾಗೂ ಪರಿಸರ ಇಲಾಖೆಯಿಂದ ತಾತ್ವಿಕ ಮನ್ನಣೆ ದೊರೆತಿದೆ. ಅಲ್ಲಿನ ಜೀವವೈವಿಧ್ಯತೆ, ಕಾಂಡ್ಲಾವನ,ಪರಿಸರದ ಸೂಕ್ಷ್ಮ ವಿಷಯಗಳ ಕುರಿತು ಅಧ್ಯಯನ ನಡೆಸಿ ವರದಿ ಬಂದ ನಂತರ ಕಾಮಗಾರಿ ಆರಂಭಿಸಲಾಗುವುದು. ಸೀಬರ್ಡ್ ಮತ್ತು ಕಾರವಾರನಗರ ಹಾಗೂ ಅಂಕೋಲಾ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಗೋಕರ್ಣ ಕುಡಿಯುವ ನೀರಿನ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ಹೊನ್ನಾವರ,ಅಳವೆಕೋಡಿ ಬಂದರಿನ ಅಭಿವೃದ್ಧಿಗೆ ಯೋಜನೆ ಸಿದ್ಧಗೊಂಡಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವಿನಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೇಂದ್ರದ ಖೇಲೋ ಇಂಡಿಯಾ ಯೋಜನೆಯಡಿ ಹಳಿಯಾಳದಲ್ಲಿ ಬಹುಪಯೋಗಿ ಕ್ರೀಡಾಂಗಣ, ದಾಂಡೇಲಿಯಲ್ಲಿ ಸಿದ್ದಿ ಕ್ರೀಡಾಪಟುಗಳ ತರಬೇತಿಗೆ ವಸತಿಶಾಲೆ ಸಮೇತ ಕ್ರೀಡಾಂಗಣ ಮಂಜೂರಿಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಕಾರವಾರ, ಶಿರಸಿ, ಜೊಯಿಡಾ, ಹಳಿಯಾಳ ತಾಲೂಕುಗಳು ಬಯಲು ಶೌಚ ಮುಕ್ತ ತಾಲೂಕುಗಳಾಗಿವೆ. ಇನ್ನುಳಿದ ಏಳು ತಾಲೂಕುಗಳು ಆದಷ್ಟು ಬೇಗ ಬಯಲು ಶೌಚ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತದೆ. ಶಿರವಾಡ ಡಂಪಿಂಗ್ಯಾರ್ಡ್ ಸ್ಥಳಾಂತರದ ಕುರಿತು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಕಡವಾಡ-ಸುಂಕೇರಿ ಸೇತುವೆ ಕಾಮಗಾರಿ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
Leave a Comment