ಕಾರವಾರ: ಕಪ್ಪು ಇರುವೆ ಕಚ್ಚಿ ಅಂಗವಿಕಲ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೈತಖೋಲ್ದಲ್ಲಿ ನಡೆದಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಮಲಾ ಎಂಬಾತರು ಪುಟ್ಟದೊಂದು ಗುಡಿಸಲು ಕಟ್ಟಿಕೊಂಡು ವಾಸವಿದ್ದರು. ಅವರ ಅವಳಿ ಮಕ್ಕಳಾದ ಶಿವು ಹಾಗೂ ಸಂಗೀತಾ ಹುಟ್ಟುತ್ತಲೇ ಅಂಗವಿಕಲರಾಗಿದ್ದರು. ಕಮಲಾ ಹೊಟೇಲ್ವೊಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಉಳಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವ್ಯಯಿಸುತ್ತಿದ್ದರು. ಹೀಗಿರುವಾಗ ತುಳಸಿ ಮದುವೆ ಆಚರಿಸಲು ಮನೆಗೆ ಕಬ್ಬು ತಂದಿದ್ದರು. ಕಬ್ಬಿಗೆ ಆಗಮಿಸಿದ ಇರುವೆಗಳು ಪಕ್ಕದಲ್ಲಿಯೇ ಮಲಗಿದ್ದ ಶಿವುವನ್ನು ಸಂಪೂರ್ಣವಾಗಿ ಆಕ್ರಮಿಸಿವೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹಲವು ಗಂಟೆಗಳ ನಂತರ ಶಿವುವಿನ ಕಿರುಚಾಟ ಗಮನಿಸಿದ ಕೆಲವರು ಸ್ಥಳಕ್ಕೆ ಭೇಟಿ ನೀಡಿದಾಗ ಮೈ ತುಂಬ ಇರುವೆ ಮೆತ್ತಿಕೊಂಡಿರುವದನ್ನು ಗಮನಿಸಿದ್ದಾರೆ. ಅಸ್ವಸ್ಥಗೊಂಡ ಶಿವುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಶಿವು (19 ವರ್ಷ) ಸಾವನಪ್ಪಿದ್ದರು. ಶವ ಸಂಸ್ಕಾರಕ್ಕೂ ಕಾಸಿಲ್ಲದ ಪರಿಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಸ್ವಾಂತ್ವಾನ ಹೇಳಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಗರಸಭಾ ಸದಸ್ಯೆ ಛಾಯಾ ಜಾವ್ಕಾರ್ ಹಾಗೂ ಸ್ಥಳೀಯರಾದ ವಿಲ್ಸನ್ ಫರ್ನಾಂಡಿಸ್ ಅಂತಿಮ ಸಂಸ್ಕಾರ ನೆರವೇರಿಸಿದರು. ಡಿಎಫ್ಓ ಗಣಪತಿ ಕೆ ಉಚಿತ ಕಟ್ಟಿಗೆ ವ್ಯವಸ್ಥೆ ಮಾಡಿಕೊಟ್ಟರು.
Leave a Comment