ಕಾರವಾರ: ವಿದ್ಯುತ್ ಅವಘಡದಿಂದ ಹೆಸ್ಕಾಂ ಸಿಬ್ಬಂದಿ ಅಸ್ವಸ್ಥಗೊಂಡ ಘಟನೆ ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಕ್ರಾಸ್ ಬಳಿ ನಡೆದಿದೆ.
ಗಾಳಿ ಹಾಗೂ ಮಳೆಗೆ ಹರಿದಿದ್ದ ವಿದ್ಯುತ್ ತಂತಿ ಜೋಡಿಸುತ್ತಿದ್ದ ವೇಳೆ ಕಿಡಿಗೇಡಿಗಳು ಪ್ಯೂಜ್ ಅವಳವಡಿಸಿದ ಕಾರಣ ಅವಘಡ ಸಂಭವಿಸಿದೆ. ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ ಹರಿದಿದ್ದು, ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದಿತ್ತು. ಈ ದೂರು ಆಲಿಸಿದ ಹೆಸ್ಕಾಂ ವಿದ್ಯುತ್ ತಂತಿ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ದುರಸ್ಥಿ ವೇಳೆ ಘಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಮಾಡಲಾಗಿದ್ದು, ಇದನ್ನು ಸಹಿಸದ ಕಿಡಿಗೇಡಿಗಳು ಪ್ಯೂಜ್ ಹಾಕಿದ್ದಾರೆ. ಪರಿಣಾಮ ವಿದ್ಯುತ್ ದುರಸ್ಥಿ ಕೆಲಸದಲ್ಲಿದ್ದ ಪ್ರವೀಣ ಮಂಜುನಾಥ್ ಶೆಟ್ಟಿ ಹಾಗೂ ನಾಗೇಂದ್ರ ಭಟ್ಟ ಎಂಬಾತರು ಗಾಯಗೊಂಡಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದ ಕಾರಣ ಪ್ಯುಜ್ ತೆಗೆದ ನಂತರ ಅಲ್ಲಿ ಸಿಬ್ಬಂದಿ ನೇಮಕ ಸಾದ್ಯವಾಗಿರಲಿಲ್ಲ. ಹೀಗಾಗಿ ಪ್ಯೂಜ್ ಅಳವಡಿಸಲಾದ ಕೊಠಡಿಗೆ ಬೀಗ ಹಾಕಿ ಸಿಬ್ಬಂದಿ ವಿದ್ಯುತ್ ತಂತಿ ದುರಸ್ಥಿಗೆ ತೆರಳಿದ್ದರು. ಹೀಗಿರುವಾಗ ಬೀಗ ಒಡೆದು ಅನಧಿಕೃತವಾಗಿ ಕೊಠಡಿಯೊಳಗೆ ನುಗ್ಗಿದ ಕಿಡಿಗೇಡಿಗಳು ವಿಕೃತಿ ಪ್ರದರ್ಶಿಸಿದ್ದಾರೆ. ಈ ವೇಳೆ ಹೆಸ್ಕಾಂ ವತಿಯಿಂದ ಕೈಗೊಂಡ ಕೆಲಸ ಬಹುತೇಕ ಪೂರ್ತಿಗೊಂಡಿದ್ದರಿಂದ ಹೆಚ್ಚಿನ ಅನಾಹುತ ನಡೆದಿಲ್ಲ. ಕೆಲಸ ಪೃಗತಿಯಲ್ಲಿರುವಾಗ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದರೆ ಎರಡು ಜೀವಗಳು ಬಲಿಯಾಗುತ್ತಿದ್ದವು ಎಂದು ಅಂಕೋಲಾ ಸೆಕ್ಷನ್ ಆಫಿಸರ್ ರಾಘು ನಾಯ್ಕ ಆತಂಕ ವ್ಯಕ್ತಪಡಿಸಿದರು. ಗಾಯಗೊಂಡವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ರಾಮನಗುಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅಂಕೋಲಾದಲ್ಲಿ ಚಿಕಿತ್ಸೆ ನೀಡಲಾಯಿತು. ಅಂಕೋಲಾಗೆ ಆಗಮಿಸಿದ್ದ ಪ್ರವೀಣ ಶೆಟ್ಟಿಯವರ ಪಾಲಕರು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರಕ್ಕೆ ಕರೆದೊಯ್ದರು. ಪ್ರವೀಣ ಶೆಟ್ಟಿಯವರ ಇಬ್ಬರು ಸಹೋದರರು ಕೂಡ ಹೆಸ್ಕಾಂ ಸೇವೆಯಲ್ಲಿದ್ದಾರೆ.
ಎರಡು ಜೀವದ ಜೊತೆ ಚಲ್ಲಾಟ ನಡೆಸಿದ ಕಿಡಿಗೇಡಿಗಳ ವಿರುದ್ದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೆಸ್ಕಾಂ ನೌಕರರು ಕೂಡ ಈ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ಜನರ ಸೇವೆಗಾಗಿ ಹಗಲಿರುಳು ದುಡಿಯುತ್ತಿರುವ ಲೈನ್ಮೇನ್ಗಳ ನೈಜ ಪರಿಸ್ಥಿತಿಯನ್ನು ಜನ ಅರ್ಥ ಮಾಡಿಕೊಳ್ಳಬೇಕು. ಜನರು ಕತ್ತಲೆಯಲ್ಲಿರಬಾರದು ಎಂಬ ಉದ್ದೇಶದಿಂದ ವಿದ್ಯುತ್ ತಂತಿ ಸರಿಪಡಿಸಲು ತೆರಳಿದವರ ಮೇಲೆ ಇಂತಹ ಕೃತ್ಯ ನಡೆಸುವದು ಸರಿಯಲ್ಲ ಎಂದು ಇಲಾಖೆ ಸಿಬ್ಬಂದಿ ಅಭಿಪ್ರಾಯ ಹಂಚಿಕೊಂಡರು. ಹೆಸ್ಕಾಂ ಎಂದಿಗೂ ಜನರಿಗೆ ತೊಂದರೆ ನೀಡುವದಕ್ಕಾಗಿ ವಿದ್ಯುತ್ ಕಡಿತ ಮಾಡಿಲ್ಲ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ವಿದ್ಯುತ್ ಕಡಿತ ಮಾಡಲಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸೆಕ್ಷನ್ ಆಫಿಸರ್ ರಾಘು ನಾಯ್ಕ ಮನವಿ ಮಾಡಿದರು. ರಾಮನಗುಳಿ ಭಾಗದಲ್ಲಿ ಕೆಲಸ ನಿರ್ವಹಿಸಲು ಒಬ್ಬರೇ ಖಾಯಂ ನೌಕರರಿದ್ದು, ಇಬ್ಬರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿ ಕೊರತೆ ಕಾರಣ ಕೆಲಸಗಳು ಕೊಂಚ ವಿಳಂಭವಾಗುತ್ತದೆ. ಇಂತಹ ಘಟನೆ ಮರುಕಳಿಸಿದರೆ ಹೆಸ್ಕಾಂನಲ್ಲಿ ಕೆಲಸ ಮಾಡಲು ಯಾರೂ ಆಸಕ್ತಿ ತೋರುವದಿಲ್ಲ ಎಂದು ಅವರು ಹೇಳಿದರು.
Leave a Comment