ಕಾರವಾರ: ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆದಿರುವದನ್ನು ಖಂಡಿಸಿದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ್ ಮೇಲೆಯೂ ಹಲ್ಲೆ ನಡೆದಿದೆ. ಮಂಜುನಾಥ ಹೆಗಡೆ ಎಂಬಾತರು ತಮ್ಮನ್ನು ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ. ಪಾಟೀಲ್ಗೆ ಶಿವರಾಮ ಗಾಂವ್ಕರ್ ಗುರುವಾರ ದೂರು ನೀಡಿದರು
ಯು.ಕೆ ಬ್ಯಾಂಕ್ ವ್ಯವಸ್ಥಾಪಕ ಚಂದ್ರು ಭಟ್ ಹಾಗೂ ಅವರ ಮನೆಯವರ ಮೇಲೆ ಮಂಜುನಾಥ ಹೆಗಡೆ ಹಾಗೂ ಸಂದೀಪ ನಾಯ್ಕ ಎಂಬುವವರನ್ನು ಒಳಗೊಂಡ 12 ಜನರು ಕೆಲ ತಿಂಗಳುಗಳ ಹಿಂದೆ ಹಲ್ಲೆ ನಡೆಸಿದ್ದರು. ಈ ಹಲ್ಲೆಯನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ ಖಂಡಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಆರೋಪಿ ಮಂಜುನಾಥ ಹೆಗಡೆ ಯಲ್ಲಾಪುರದಲ್ಲಿ ತಮ್ಮ ಕಾರನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ ಬಗ್ಗೆ ಶಿವರಾಮ ಗಾಂವ್ಕರ್ ಪೊಲೀಸ್ ವರಿಷ್ಟರ ಬಳಿ ದೂರಿದರು. ಘಟನೆ ನಡೆದ ತಕ್ಷಣವೇ ಯಲ್ಲಾಪುರ ಠಾಣೆಗೆ ತೆರಳಿ ಆತನ ವಿರುದ್ಧ ದೂರು ದಾಖಲಿಸಲಾಯಿತು. ಎಫ್ಐಆರ್ ಕೂಡ ದಾಖಲಾಯಿತು. ಆದರೆ ಅಂದೇ ಸಂಜೆ ಮತ್ತೆ ಆತ ಜಾಮೀನಿನ ಮೇಲೆ ಹೊರಬಂದಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿರುವ ಬಗ್ಗೆ ವಿವರಿಸಿದರು. ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಆರೋಪಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಎಂದು ಆರೋಪಿಸಿದರು.
ಆರೋಪಿ ಬಿಡುಗಡೆಯಿಂದ ಸ್ಥಳೀಯರು ಭಯದ ವಾತಾವರಣದಲ್ಲಿಯೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿದವರಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಅಪಾಯಕಾರಿ ವ್ಯಕ್ತಿಗಳಿಂದ ಮುಂದಿನ ದಿನಗಳಲ್ಲಿ ದೊಡ್ಡ ಅವಘಡ ಸಂಬವಿಸುವ ಸಾದ್ಯತೆಯಿದೆ. ಹೀಗಾಗಿ ಅವರ ಜಾಮೀನಿನನ್ನು ರದ್ದುಗೊಳಿಸಿ, ಅವರ ಮೇಲೆ ಇಲಾಖೆ ನಿಗಾ ವಹಿಸಬೇಕು’ ಎಂದು ಮನವಿ ಮಾಡಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಆರ್.ಹೆಗಡೆ, ಶಿರಸಿ ಘಟಕದ ಅಧ್ಯಕ್ಷ ಗಜಾನನ ಜೋಶಿ, ಹೊನ್ನಾವರ ಘಟಕದ ಅಧ್ಯಕ್ಷ ಪರಮೇಶ್ವರ ಭಟ್, ಕುಮಟಾ ಘಟಕದ ಗಣಪತಿ ನಾಯ್ಕ, ಭಟ್ಕಳದ ಶ್ರೀಧರ ಹೆಬ್ಬಾರ ಹಾಜರಿದ್ದರು.
Leave a Comment