ಕಾರವಾರ: ವಿದ್ಯಾರ್ಥಿ ಜೀವನದಿಂದಲೇ ಕಾನೂನಿನ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರೌಢಶಾಲೆ ವಿಭಾಗದ ಪಠ್ಯ ಪುಸ್ತಕದಲ್ಲಿ ಕಾನೂನು ಪಾಠಗಳನ್ನು ಅಳವಡಿಸಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಹೇಳಿದರು.
ದಶದಿನದ ಕಾನೂನು ಸೇವೆಗಳ ಅಭಿನಾಯದ ಮೊದಲೇ ದಿನದ ಕಾರ್ಯಕ್ರಮಗಳನ್ನು ಸೇಂಟ್ ಮೈಕೆಲ್ ಕಾನ್ವೆಂಟ್ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಿರಿಯ ವಯಸ್ಸಿನಿಂದಲೇ ಕಾನೂನಿನ ಕುರಿತು ತಿಳುವಳಿಕೆ ಹೊಂದುವುದು ಅವಶ್ಯಕ. ಅದರಿಂದ ಕಾನೂನು ಬಾಹಿರ ಚಟುವಟಿಕೆಗಳು ಕಡಿಮೆಯಾಗುತ್ತದೆ ಎಂದರು. ಯಾವುದೇ ರೀತಿಯ ಕಾನೂನು ಸಲಹೆಗಳಿಗೆ ಅಥವಾ ಪರಿಹಾರಕ್ಕಾಗಿ ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಕೆಲವು ಪ್ರಕರಣಗಳಲ್ಲಿ ಇಲ್ಲಿ ಉಚಿತವಾಗಿ ವಕೀಲರನ್ನು ನೇಮಿಸಿ, ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಸಹಕರಿಸಲಾಗುತ್ತದೆ. ಇದರ ಸದುಪಯೋಗ ಎಲ್ಲರೂ?ಪಡೆಯುವಂತಾಗಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಕಲಿಯುವಲ್ಲಿ, ಕೆಲವು ಅಗತ್ಯ ವಿಷಯಗಳನ್ನು ಅರಿತುಕೊಳ್ಳುವಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು. ಅದನ್ನು ಬಿಟ್ಟು ಉಪಯೋಗವಿಲ್ಲದ ಇತರ ಬಾಹ್ಯ ಚಟುವಟಿಕೆಗಳಿಂದ ದೂರ ಇರಬೇಕು. ಯಾವುದೇ ಸಾಧನೆ ಮಾಡುವಾಗಲೂ ಅದರ ಜತೆ ಕಷ್ಟ ನಷ್ಟಗಳು ಇರುತ್ತದೆ. ಅದನ್ನು ಅನುಭವಿಸಿಕೊಂಡು, ಪರಿಶ್ರಮದಿಂದ ಗುರಿ ಮುಟ್ಟಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಕಾನೂನು ಸೇವೆಗಳ ದಿನಾಚರಣೆಯ ಮಹತ್ವ ಮತ್ತು ಕಾನೂನು ಸೇವೆಗಳ?ಪ್ರಾಧಿಕಾರದ ಧ್ಯೇಯೋದ್ದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ದೇಶದಲ್ಲಿ ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕವಾಗಿ ಹಾಗೂ ಇತರೆ ವಿಧಾನಗಳಲ್ಲಿ ಶೋಷಣೆಗಳು ಆಗುತ್ತಿವೆ. ಹೀಗಾಗಿ ಮೊದಲು ಅವರನ್ನು ಜಾಗೃತಗೊಳಿಸುವ ಅವಶ್ಯಕತೆ ಇದೆ. ಕಾನೂನಿನ ಅರಿವನ್ನು ಅವರಿಗೆ ನೀಡುವ ಮೂಲಕ ಅವರನ್ನು ಜಾಗೃತಗೊಳಿಸಬೇಕು. ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಸಹ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಸಂಪೂರ್ಣವಾಗಿ ತಡೆಯಲಾಗುತ್ತಿಲ್ಲ. ಬಹುತೇಕರಲ್ಲಿ ಕಾನೂನಿನ ಅರಿವಿನ ಕೊರತೆ ಇರುವುದೇ ಇದಕ್ಕೆ ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು. ಸೇಂಟ್ ಮೈಕೆಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯಧ್ಯಾಪಕಿ ಸಿಸ್ಟರ್ ಮರ್ಸಿ ಜಾರ್ಜ್, ವಕೀಲೆ ಸಂಧ್ಯಾ ತಳೇಕರ್ ಇದ್ದರು.
Leave a Comment