ಕಾರವಾರ: ತಾಲೂಕು ಪಂಚಾಯಿತಿ ನಾಮನಿರ್ದೇಶಿತ ಸದಸ್ಯರು ನಾಮಕಾವಸ್ಥೆಗೆ ಮಾತ್ರ ಸೀಮಿತ ಎಂಬಂತಾಗಿದೆ. ಕೆಡಿಪಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಬೆಲೆಯೇ ಇಲ್ಲ. ಈ ಕುರಿತು ಸಭೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.
ನಾಮ ನಿರ್ದೇಶಿತ ಸದಸ್ಯರಿಗೆ ಅಧಿಕಾರಿಗಳು ಗೌರವ ಕೊಡುವದಿಲ್ಲ. ಸದಸ್ಯರ ಹೆಸರು ಸೂಚಿಸುವ ನಾಮ ಫಲಕವನ್ನು ಹಾಕಿಲ್ಲ. ನಾಮನಿರ್ದೇಶಿತ ಸದಸ್ಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾಮ ನಿರ್ದೇಶಿತರು ಗಮನಕ್ಕೆ ತಂದ ಒಂದೇ ಒಂದು ಸಮಸ್ಯೆಯನ್ನು ಈ ವರೆಗೆ ಬಗೆಹರಿಸಿಲ್ಲ. ಠರಾವಿನಲ್ಲಿಯೂ ನಮಗೆ ಸ್ಥಾನವಿಲ್ಲ ಎಂದು ತಾಲೂಕು ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಚಂದ್ರಕಾಂತ ಚಿಂಚಣಕರ್ ಕೆಡಿಪಿ ಸಭೆಯಲ್ಲಿ ಶಾಸಕ ಸತೀಶ್ ಸೈಲ್ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಭವಿಷ್ಯದಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಸೂಕ್ತ ಗೌರವ ಕೊಡುವ ಭರವಸೆ ನೀಡಿದರು.
ಇನ್ನು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಊಟವನ್ನು ನೀಡಲು ಅಂಗನವಾಡಿ ಕೇಂದ್ರದ ಹತ್ತಿರವಿರುವ ಶಾಲಾ ಕಟ್ಟಡಗಳ ಖಾಲಿ ಕೊಠಡಿಗಳನ್ನು ಬಳಕೆ ಮಾಡಬೇಕು ಎಂದು ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ಸೂಚಿಸಿದರು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಊಟದ ಜೊತೆ ಮೊಟ್ಟೆ, ಕಾಳು ಸೇರಿದಂತೆ ಇನ್ನಿತರ ಆಹಾರವನ್ನು ನೀಡಲಾಗುತ್ತದೆ. ಆದರೆ ಕೆಲ ಅಂಗನವಾಡಿಗಳು ಚಿಕ್ಕದಾಗಿದ್ದು, ಫಲಾನುಭವಿಗಳು ಮಕ್ಕಳ ಎದುರು ಊಟ ಮಾಡಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಯಾವ ತಾಯಿಗೂ ಮಕ್ಕಳನ್ನು ನೋಡುತ್ತ ಮೊಟ್ಟೆ ಸೇರಿದಂತೆ ಇನ್ನಿತರ ಆಹಾರ ಸೇವಿಸಲು ಸಾಧ್ಯವಿಲ್ಲ. ಆದ್ದರಿಂದ ಆಯಾ ಅಂಗನವಾಡಿಗಳ ವ್ಯಾಪ್ತಿಯ ಶಾಲೆಗಳ ಖಾಲಿ ಕೊಠಡಿಗಳನ್ನು ಫಲಾನುಭವಿಗಳಿಗೆ ಊಟ ನೀಡಲು ಬಳಸು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಗರದ ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್ಗಳು ಒಡೆದು ಹೋಗಿದ್ದು, ಈ ಭಾಗದಲ್ಲಿ ಹರಿಯುವ ಚರಂಡಿ ನೀರು ಕುಡಿಯುವ ನೀರಿಗೆ ಸೇರಿ ಕಲುಷಿತಗೊಳ್ಳುತ್ತಿದೆ. ಅಲ್ಲದೆ ಇದು ಆಯಾ ಭಾಗದ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕೆಲವರಿಗೆ ವಾಂತಿ ಭೇದಿಗೆ ಕಾರಣವಾಗಿದೆ. ಅಲ್ಲದೆ ನಗರ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರು ನೀರು ಸಂಗ್ರಹಣೆ ಮಾಆಡಿರುವುದರಿಂದ ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗುತ್ತಿದೆ. ಈ ಬಗ್ಗೆ ನಗರಸಭೆಯವರಿಗೆ ಕಟ್ಟಡ ಕಾಮಗಾರಿ ಆರಂಭದಲ್ಲಿಯೇ ಸಂಬಂಧಪಟ್ಟವರಿಗೆ ಸೂಚನೆ ನೀಡಲು ಸೂಚಿಸಬೇಕು ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಸೂರಜಾ ನಾಯ್ಕ ತಿಳಿಸಿದರು.
ಈ ಬಗ್ಗೆ ನಗರಸಭೆಯ ಆರೋಗ್ಯ ನಿರೀಕ್ಷಕ ಯಾಕೂಬ್ ಪ್ರತಿಕ್ರಿಯಿಸಿ, ಈಗಾಗಲೇ ಎಲ್ಲ ಕಡೆಯಲ್ಲಿಯೂ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಪೈಪುಗಳ ಒಡೆದಿರುವ ಕಡೆಯಲ್ಲಿ ಸರಿಪಡಿಸಲು ಗಮನ ಹರಿಸುತ್ತೇವೆ ಎಂದರು. ಎಲ್ಲ ಕಡೆಯ ಒಳ ಚರಂಡಿ ಹಾಗೂ ಕುಡಿಯುವ ನೀರಿನ ಪೈಪುಗಳನ್ನು ಶೀಘ್ರವೇ ಸರಿಪಡಿಸಬೇಕು ಎಂದು ಶಾಸಕ ಸೈಲ್ ಸೂಚಿಸಿದರು. ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದ್ದು, ಅವರಿಗೆ ಸೂಕ್ತ ವೇತನ ನೀಡದೆ ಗುತ್ತಿಗೆದಾರರು ವಂಚಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಹೊರ ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಅವರ ಗುತ್ತಿಗೆದಾರರು ಯಾರು? ಅವರು ಎಷ್ಟು ವರ್ಷದಿಂದ ನೌಕರರನ್ನು ಪೂರೈಸುತ್ತಿದ್ದಾರೆ? ಮಾಹಿತಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗುತ್ತಿಗೆದಾರರು ಸರಕಾರದಿಂದ ಬರುವ ಸಂಬಳದಲ್ಲಿ ಅರ್ಧದಷ್ಟು ಕಮಿಷನ್ ಪಡೆದು ನೌಕರರಿಗೆ ಉಳಿದವನ್ನು ಪಾವತಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅವರನ್ನೇ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಹೀಗಾಗಿ ಶೀಘ್ರವೇ ಈ ಬಗ್ಗೆ ವರದಿ ನೀಡಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
Leave a Comment