ಕಾರವಾರ:
ಎಲ್ಲರ ನಿರೀಕ್ಷೆಯಂತೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಭಾನುವಾರ ಸಾರ್ವಜನಕರ ಮುಂದೆ ಪ್ರತ್ಯಕ್ಷರಾದರು. ಕ್ಷೇತ್ರದ ಅಭಿವೃದ್ದಿಗಾಗಿ 2018ರ ಚುನಾವಣೆಯಲ್ಲಿ ಸ್ಪರ್ಧಿಸುವದಾಗಿ ಅವರು ಘೋಷಿಸಿದರು.
ಆನಂದ ಅಸ್ನೋಟಿಕರ್ ಮನೆ ಮುಂದೆ ಅವರ ಬೆಂಬಲಿಗರು ಮೆನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಾಲ್ಕುವರೆ ವರ್ಷಗಳಿಂದ ಕ್ಷೇತ್ರದಿಂದ ದೂರ ಇದ್ದ ಆನಂದ ಅಸ್ನೋಟಿಕರ್ ತಮ್ಮ ರಾಜಕೀಯ ನಿಲುವು ತಿಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವ ಸಲುವಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು. ನಂತರ ತಮ್ಮ ರಾಜಕೀಯ ನಿಲುವು ಪ್ರಕಟಿಸಿದರು. ಬರುವ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುವದಾಗಿ ಅವರು ಬೆಂಬಲಿಗರಿಗೆ ಆಶ್ವಾಸನೆ ನೀಡಿದರು. ಇಷ್ಟು ದಿನಗಳ ಕಾಲ ಜನರಿಂದ ದೂರವಿರುದಕ್ಕೆ ಬಹಿರಂಗ ಕ್ಷಮೆ ಕೋರಿದರು. ಮಾಡಿದ ತಪ್ಪನ್ನು ತಿದ್ದಿಕೊಂಡು ರಾಜಕೀಯದಲ್ಲಿ ಸಕ್ರೀಯವಾಗಿರುವ ಭರವಸೆ ನೀಡಿದರು.
* ಬಿಜೆಪಿಯಿಂದ ಸ್ಪರ್ಧಿಸುವ ಕುರಿತು ಸುಳಿವು
“ನಾನು ಇನ್ನು ಬಿಜೆಪಿಯಲ್ಲಿದ್ದೇನೆ. ಆದರೆ, ಬಿಜೆಪಿಯ ಸ್ಥಳೀಯ ಮುಖಂಡರು ಅದನ್ನು ಒಪ್ಪುತ್ತಿಲ್ಲ” ಎಂದು ಆನಂದ ಅಸ್ನೋಟಿಕರ್ ಹೇಳಿದರು. ನಾಲ್ಕುವರೆ ವರ್ಷಗಳಿಂದ ಪಕ್ಷದ ಯಾವ ಕಾರ್ಯಕ್ರಮಕ್ಕೂ ಹೋಗಿಲ್ಲ. ಪಕ್ಷ ಸಂಘಟನೆಯಲ್ಲಿಯೂ ಗುರುತಿಸಿಕೊಂಡಿಲ್ಲ. ಹೀಗಾಗಿ ಪಕ್ಷದ ಸ್ಥಳೀಯ ಮುಖಂಡರು ನನ್ನಿಂದ ದೂರವಿದ್ದಾರೆ ಎಂದರು. ಬಿಜೆಪಿ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದ ಆನಂದರ ತಾಯಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್ ಕೂಡ ಜೊತೆಯಲ್ಲಿದ್ದರು. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಇನ್ನು ನಿರ್ಧರಿಸಿಲ್ಲ. ಹಿರಿಯರ ಸಲಹೆ ಪಡೆದು ಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದು ಆನಂದ ಅಸ್ನೋಟಿಕರ್ ಹೇಳಿದರು. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ದುರಿಣರು ಇಂದಿಗೂ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಡಗುಂಜಿ ಗಣಪತಿ ಹಾಗೂ ಮೂಕಾಂಬಿಕೆ ಪೂಜೆ ಸಲ್ಲಿಸಿ ರಾಜಕೀಯ ಮರು ಪ್ರವೇಶ ನಡೆಸುವದಾಗಿ ತಿಳಿಸಿದರು.
* ಎದುರಾಳಿ ವಿರುದ್ದ ವಾಗ್ದಾಳಿ
ತಮ್ಮ ಭಾಷಣದಲ್ಲಿ ಆನಂದ ಅಸ್ನೋಟಿಕರ್ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಹೆಸರನ್ನು ತೆಗೆದುಕೊಳ್ಳದೇ ಪರೋಕ್ಷ ವಾಗ್ದಾಳಿ ನಡೆಸಿದರು. ಕ್ಷೇತ್ರದಲ್ಲಿ ಭೃಷ್ಟಾಚಾರ ವಿಪರೀತವಾಗಿದೆ ಎಂದು ಆರೋಪಿಸಿದರು. ಮುಂದಿನ ಚುನಾವಣೆಯಲ್ಲಿ ಆಯ್ಕೆಯಾದರೆ ಹಾಲಕ್ಕಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವದು ಹಾಗೂ ಕ್ಷೇತ್ರದಲ್ಲಿ ಕನಿಷ್ಟ 10ಸಾವಿರ ಉದ್ಯೋಗ ಸೃಷ್ಟಿ ತಮ್ಮ ಗುರಿ ಎಂದು ಹೇಳಿದರು. ಪರಿಸರಕ್ಕೆ ಪೂರಕವಾಗಿ ಉದ್ಯೋಗ ಸೃಷ್ಟಿಸಲು ಕಂಪನಿ ಸ್ಥಾಪಿಸುವದಾಗಿಯೂ ಅವರು ಘೋಷಿಸಿದರು. ಮೀನುಗಾರರ ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವದಾಗಿ ತಿಳಿಸಿದರು. ಈವರೆಗೆ ತಾನೂ ಯಾವ ಪಕ್ಷಕ್ಕೂ ಮೋಸ ಮಾಡಿಲ್ಲ. ಸ್ವಾಭಿಮಾನದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದರು.
ಬೆಂಬಲಿಗರಿಗೆ ಬಿರಿಯಾನಿ ಬೋಜನ!
ಬೆಳಗ್ಗೆ 11 ಗಂಟೆಯಿಂದ 12.30ರ ವರೆಗೆ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಅವರನ್ನು ಸಮಾದಾನ ಪಡಿಸಲು ನಿವಾಸಕ್ಕೆ ಆಗಮಿಸಿದ ಆನಂದರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತು ತಂದರು. ಪ್ರತಿಭಟನೆ ಅಂತ್ಯವಾಗುವ ವೇಳೆಗಾಗಲೇ ಮದ್ಯಾಹ್ನವಾಗಿದ್ದರಿಂದ ಎಲ್ಲರೂ ಬಿರಿಯಾನಿ ಊಟದ ಸ್ವೀಕರಿಸಬೇಕು ಎಂದು ಆನಂದ ಅಸ್ನೋಟಿಕರ್ ಮನವಿ ಮಾಡಿದರು. ಎಂ.ಜಿ ರಸ್ತೆಯಲ್ಲಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಜನ ಮುಗಿ ಬಿದ್ದರು.
Leave a Comment