ಕಾರವಾರ: ಸಾರ್ವಜನಿಕರಲ್ಲಿ ಸ್ವಚ್ಛತಾ ಪ್ರಜ್ಞೆ ಮೂಡಿಸುವುದರ ಜತೆಗೆ ಸತತ 153 ವಾರಗಳಿಂದ ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವುದರ ಮೂಲಕ ಮಾದರಿಯಾಗಿರುವ ಪಹರೆ ವೇದಿಕೆ ಪಾದಾಧಿಕಾರಿಗಳು, ಕಾರ್ಯಕರ್ತರು ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸುತ್ತಮುತ್ತ ಸ್ವಚ್ಛತೆ ನಡೆಸಿದರು.
ವಾರ್ತಾ ಇಲಾಖೆ ಸುತ್ತಮುತ್ತಲಿನ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು, ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಬಾಟಲ್ ಹಾಗೂ ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು. ಅಲ್ಲದೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಾರ್ತಾಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಆ ಪ್ರದೇಶವನ್ನು ಸ್ವಚ್ಛಗೊಳಿಸಿದರು.
ಸುಮಾರು ಒಂದುವರೆಗಂಟೆಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮದ ಬಳಿಕ ಅನಿಸಿಕೆ ಹಂಚಿಕೊಂಡ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಟಿ.ಬಿ ಹರಿಕಂತ್ರ, ಸತತ 153 ವಾರಗಳ ಕಾಲ ಸ್ವಚ್ಛತಾ ಅಭಿಯಾನ ನಡೆಸಿರುವ ಪಹರೆ ವೇದಿಕೆಯ ಕಾರ್ಯ ಶ್ಲಾಘನಿಯವಾಗಿದೆ. ಪಹರೆ ವೇದಿಕೆ ಇನ್ನಷ್ಟು ಸಾರ್ವಜನಿಕರ ಸಹಕಾರ ದೊರೆತಲ್ಲಿ ನಗರವನ್ನು ಹೆಚ್ಚು ಸುಂದರವಾಗಿಸಲು ಸಾಧ್ಯವಿದೆ. ಅಲ್ಲದೆ ಸ್ವಚ್ಛತೆ ನಡೆಸುವ ಭಾಗಗಳಲ್ಲಿ ಮತ್ತೆ ತ್ಯಾಜ್ಯಗಳನ್ನು ಬಿಸಾಕದಂತೆ ಮಾಹಿತಿಯುಳ ಕರಪತ್ರಗಳನ್ನು ಹಚ್ಚಿ ಜನರಲ್ಲಿ ಜಾಗೃತಿಗೊಳಿಸಬೇಕು ಎಂದು ಹೇಳಿದರು.
ಇದಲ್ಲದೆ ಶಾಲಾ ವಿದ್ಯಾರ್ಥಿಗಳು ಪ್ರತಿ ನಿತ್ಯ ತಾವು ತಿಂದಿರುವ ಕರಕಲು ತಿಂಡಿಗಳ ಪ್ಲಾಸಟಿಕ್ ಕಾಗದ ಸೇರಿದಂತೆ ಇನ್ನಿತರ ವಸ್ಥುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯಾ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು. ಆಯಾ ವಾರ್ಡ್ ಸ್ವಚ್ಛತೆ ಮಾಡುವುದರ ಮೂಲಕ ಆ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಸ್ವಚ್ಛತೆ ಪ್ರಜ್ಞೆ ಮೂಡಿಸುವುದು. ಇನ್ನು ಕೆಲ ಭಾಗಳಲ್ಲಿ ಕೆಲವರು ತ್ಯಾಜ್ಯಗಳನ್ನು ಬಿಸಾಡುತ್ತಿದ್ದು, ಇದು ಕಂಡುಬಂದಲ್ಲಿ ಪ್ರತಿಯೊಬ್ಬರು ಎಚ್ಚರಿಸುವ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.
ಮುಂದಿನ ಶನಿವಾರ ಮಯೂರ ವರ್ಮ ವೇದಿಕೆ ಬಳಿ ಪುಟ್ಪಾತ್ ಬಳಿ ಕೆಲಸ ಕೈಗೊಳ್ಳಲು ತಿರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಪಹರೆ ವೇದಿಕೆ ಸದಸ್ಯರಾದ ಸುರೇಶ ಶೆಟ್ಟಿ, ಖೈರೋನ್ನಿಸಾ ಶೇಖ್, ಪತ್ರಕರ್ತರಾದ ವಸಂತಕುಮಾರ್, ನವೀನ್ ಸಾಗರ, ಸುಭಾಸ್ ದೂಪದಹೊಂಡ, ಶೇಷಗಿರಿ ಮುಂಡಳ್ಳಿ, ಸಂದೀಪ್ ಸಾಗರ ಇನ್ನಿತರರು ಇದ್ದರು.
Leave a Comment