ಕಾರವಾರ:
ಯಲ್ಲಾಪುರ ತಾಲೂಕಿನ ಕಿರವತ್ತಿಯ ಗ್ರಾಮೀಣ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬಿಲ್ನ್ನು ಖಜಾನೆಗೆ ಸಲ್ಲಿಸದೇ ಕಾಲಹರಣ ಮಾಡುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಸತಿ ಶಾಲೆಯ ವಿಕಲಚೇತನ ಮಕ್ಕಳು ಹಾಗೂ ಅವರ ಪಾಲಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯ ನಿರ್ದೇಶಕರು ಕಳೆದ ಎಂಟು ತಿಂಗಳ ಹಿಂದೆ ವಸತಿ ಶಾಲೆಗೆ ಬರಬೇಕಾದ ಮೊದಲ ಅನುದಾನ ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ. ಆದರೆ ಜಿಲ್ಲೆಯ ವಿಕಲಚೇತನ ಇಲಾಖೆಯ ಅಧಿಕಾರಿಗಳು ಅನುದಾನವನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಕಾರವಾರದ ವಿಕಲಚೇತನ ಅಧಿಕಾರಿಗಳು ನಮ್ಮ ಶಾಲೆಗೆ ಬಿಡುಗಡೆಯಾದ ಅನುದಾನದ ಬಿಲ್ಲನ್ನು ತಯಾರಿಸಿ ಖಜಾನೆಗೆ ರವಾನಿಸಿಲ್ಲ. ಇದರಿಂದ ಶಾಲೆಯ ಅಂಧ,ಬುದ್ದಿಮಾಂದ್ಯ ಮಕ್ಕಳಿಗೆ ದೈನಂದಿನ ಆಹಾರ ಪೂರೈಸಲು ತೊಂದರೆಯಾಗುತ್ತಿದೆ. ಅಲ್ಲದೇ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗಕ್ಕೆ ಗೌರವ ಧನ ನೀಡಲೂ ಸಾಧ್ಯವಾಗುತ್ತಿಲ್ಲ. ಈಗಾಗಲೇ ಈ ಸಂಬಂಧ ಎರಡು ಬಾರಿ ಪತ್ರ ಬರೆದು ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಕಾರಿಗಳು ಕೂಡಲೇ ವಿಕಲಚೇತನ ಅಧಿಕಾರಿಗಳಿಂದ ಅನುದಾನ ಬಿಲ್ಲನ್ನು ತಕ್ಷಣ ಖಜಾನೆಗೆ ಸಲ್ಲಿಸಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಯಲ್ಲಾಪುರದ ಕಿರವತ್ತಿಯ ಗ್ರಾಮೀಣ ಬುದ್ಧಿ ಮಾಂಧ್ಯ ಮಕ್ಕಳ ವಸತಿ ಶಾಲೆಯ ಸಂಸ್ಥಾಪಕ ಡಿ.ಡಿ.ಮೇಚನ್ನವರ್, ಕಾರ್ಯದರ್ಶಿ ಗಿರಿಜಾ ನಾಯಕ ಮತ್ತು 50 ಕ್ಕೂ ಹೆಚ್ಚಿನ ಸಂಖ್ಯೆಯ ವಿಕಲಚೇತನ ಮಕ್ಕಳು, ಶಿಕ್ಷಕರು, ಮಕ್ಕಳ ಪಾಲಕರು ಇದ್ದರು.
Leave a Comment