ಕಾರವಾರ: ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಅರಣ್ಯದ ಸ.ನಂ. 356ಅ ದಲ್ಲಿ ಅನಾದಿ ಕಾಲದಿಂದ ವಾಸ್ತವ್ಯದ ಮನೆಗಳಿರುವ ಕ್ಷೇತ್ರವನ್ನು ಸಕ್ರಮಗೊಳಿಸಿ ಪಹಣಿ ಪತ್ರದಲ್ಲಿ ಹೆಸರು ನಮೂದಿಸಿ ತಮಗೆ ಹಕ್ಕು ಪತ್ರ ನೀಡ ಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಸೋಮವಾರ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಸ್ಥಳೀಯರು ಹಾಗೂ ಗ್ರಾಪಂ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿನ ಸ.ನಂ.356ಅ ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಂಡು ವಾಸ್ತವ್ಯ ಮಾಡುತ್ತಿದ್ದೇವೆ. ಪ್ರತಿ ಕುಟುಂಬದ ಪ್ರತಿ ಮನೆಯೂ ಕೂಡ ನಂಬರನ್ನು ಹೊಂದಿವೆ. ಮನೆ ಕರವನ್ನು ಕೂಡ ಅನೇಕ ವರ್ಷಗಳಿಂದ ಪಾವತಿಸುತ್ತ ಬರಲಾಗಿದೆ. ಪ್ರತಿ ಮನೆಗೂ ವಿದ್ಯುತ್ ಸಂಪರ್ಕವನ್ನೂ ಸಹ ಪಡೆದಿದ್ದು ಪ್ರತಿ ಕುಟುಂಬಕ್ಕೂ ಪಡಿತರ ಚೀಟಿಯನ್ನೂ ಸಹ ಹೊಂದಿದ್ದೇವೆ. ಜೊತೆಗೆ ಆಧಾರ ಕಾರ್ಡ್, ಮತದಾರ ಚೀಟಿ, ಬ್ಯಾಂಕ್ ಖಾತೆ, ಅಡುಗೆ ಅನಿಲ ಸಂಪರ್ಕ ಇವುಗಳನ್ನು ಸಹ ಪಡೆದು ಕೊಂಡಿದ್ದೇವೆ ಎಂದು ಹೇಳಿದರು.
ಅಲ್ಲದೆ ಇದೇ ಸರ್ವೆ ನಂ. ನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲರೂ ಶಿಕ್ಷಣ ಪಡೆದಿದ್ದು ಈಗಲೂ ಕೂಡ ತಮ್ಮ ಮಕ್ಕಳು ಇಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ವಹಿವಾಟಿನ ಸ್ಥಳಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಜಿಪಿಎಸ್ ಸರ್ವೆಯನ್ನು ನಡೆಸಿದ್ದಾರೆ. ಆದ್ದರಿಂದ ಈ ಹಿಂದೆಯೇ ತಾವೆಲ್ಲ ಸೇರಿ ಪಂಚಾಯಿತಿಯಿಂದ ಹಿಡುವಳಿ ಹಾಗೂ ಪಂಚನಾಮೆಯೊಂದಿಗೆ ಲಭ್ಯವಿರುವ ಎಲ್ಲ ದಾಖಲೆಗಳೊಂದಿಗೆ ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕಳೆದ 75 ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಸಮರ್ಥಿಸುವ ಪೂರಕ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಿ ತಮ್ಮ ಹಕ್ಕಿನ ಸ್ಥಳಗಳಿಗೆ ಹಕ್ಕು ಪತ್ರ ನೀಡಲು ನಿರಾಕರಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಅಘನಾಶಿನಿ ನದಿಯ ಸನಿಹವೇ ಇರುವ ಈ ಪ್ರದೇಶದಲ್ಲಿ ವಾಸಿಸುತ್ತಿರುವ ತಾವು ಅನಾದಿಕಾಲದಿಂದ ಈ ಪ್ರದೇಶವನ್ನು ಉಪಯೋಗಿಸುತ್ತ ಬಂದಿದ್ದೆವೆ. ಅಲ್ಲದೆ ಸರಕರದಿಂದ ಸಿಗುವ ಎಲ್ಲ ಸವಲತ್ತುಗಳನ್ನೂ ಕೂಡ ಇದೇ ವಿಳಾಸದಿಂದಲೇ ಪಡೆದುಕೊಂಡಿದ್ದೇವೆ. ಸ್ಥಳವನ್ನು ಉತ್ತಮ ವಾಸಕ್ಕೆ ಯೋಗ್ಯವಾಗಿರುವಂತೆ ರೂಪಿಸಿಕೊಂಡಿದ್ದೇವೆ. ಒಂದು ವೇಳೆ ತಮ್ಮನ್ನು ಇಲ್ಲಿಂದ ಖುಲ್ಲಾ ಪಡಿಸಿದರೆ ಮುಂದಿನ ದಿನಗಳಲ್ಲಿ ತಾವು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಂಬಂಧ ಪಟ್ಟವರು ತಮ್ಮ ವಾಸ್ತವ್ಯದ ಪ್ರದೇಶವನ್ನು ಪರಿಶೀಲಿಸಿ ತಾವಿರುವ ಪಹಣಿ ಪತ್ರಿಕೆಯ ಕಾಲಂ 9 ರಲ್ಲಿ ನಮ್ಮ ಹೆಸರುಗಳನ್ನು ದಾಖಲಿಸಿ ಹಕ್ಕು ಪತ್ರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
Leave a Comment