ಕಾರವಾರ:
ನಗರದ ಮುಖ್ಯ ಅಂಚೆ ಕಚೇರಿ ಬಳಿ ರಾ.ಹೆ.66ರಲ್ಲಿ ರಸ್ತೆಗಾವಲು ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳು ದ್ವಿಚಕ್ರ ವಾಹನದಲ್ಲಿ ಸಾಗಿಸಲಾಗುತ್ತಿದ್ದ 45 ಸಾವಿರ ರೂ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಮಂಗಳವಾರ ವಾಹನ ಸಮೇತ ವಶ ಪಡೆಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ನಗರದ ಮುಖ್ಯ ಅಂಚೆ ಕಚೇರಿಯ ಬಳಿ ಬೆಳಗಿನ ಜಾವ ರಸ್ತೆಗಾವಲು ನಡೆಸುತ್ತಿದ್ದ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳನ್ನು ಸಮವಸ್ತ್ರದಲ್ಲಿ ಕಂಡ ಆರೋಪಿಯು ತನ್ನ ದ್ವಿಚಕ್ರವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಪರಾರಿಯಾದ ವ್ಯಕ್ತಿಯನ್ನು ಗಜಾ ಬಾನಾವಳಿಕರ ಎಂದು ಗುರುತಿಸಲಾಗಿದೆ. ವಾಹನವನ್ನು ಪರಿಶೀಲಿಸಿದಾಗ ಸುಮಾರು 45 ಸಾವಿರ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ದೊರೆತಿದ್ದು ವಾಹನ ಸಮೇತ ಅದನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಬಕಾರಿ ಉಪ ಆಯುಕ್ತ ಎನ್.ಶ್ಯಾಮ ಜೋಯಿಸ್ ನಿರ್ದೇಶನದಲ್ಲಿ ಅಪಕಾರಿ ಉಪ ಆಯುಕ್ತ ಎಂ.ವಿ.ಅರೆಗುಳಿ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ಸುವರ್ಣಾ ನಾಯ್ಕ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಅಬಕಾರಿ ರಕ್ಷಕರಾದ ಎಸ್.ವೈ.ಭೋವಿ, ಎನ್.ಎನ್.ಖಾನ್, ಚಾಲಕ ಶಾನೂರ ಜಮಾದಾರ, ಅರುಣ ಅಂಕೋಲೇಕರ ಪಾಲ್ಗೊಂಡಿದ್ದರು.
Leave a Comment