ಹಳಿಯಾಳ :-
2017-18 ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3000 ರೂ. ದರ ನಿಗದಿ ಮಾಡುವಂತೆ ನವೆಂಬರ್ ತಿಂಗಳ ದಿ.30 ಕೊನೆಯ ಗಡುವು ನೀಡಲಾಗಿದ್ದು ದರ ನಿಗದಿ ಮಾಡದಿದ್ದರೇ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ತಹಶೀಲ್ದಾರ್ ಅವರಿಗೆ ಮನವಿ ಮೂಲಕ ಆಗ್ರಹಿಸಿರುವ ಕಬ್ಬು ಬೆಳೆಗಾರ ಸಂಘದವರು 2015 -16 ನೇ ಸಾಲಿನಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚದ ಬಾಕಿ 223ರೂ, 2016-17ನೇ ಸಾಲಿನ ಕಬ್ಬಿನ ಬಾಕಿ ಪ್ರತಿ ಟನ್ ಕಬ್ಬಿಗೆ 500 ಬಾಕಿ ಇದ್ದು 200ರೂ ನೀಡಲಾಗಿದ್ದು ಇನ್ನೂಳಿದ 300ರೂ. ಬಾಕಿ ಮೊತ್ತವನ್ನು ರೈತರಿಗೆ ನೀಡಲಾಗುವುದು ಎಂದು ಇತ್ತೀಚೆಗೆ ಹಳಿಯಾಳದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಯವರು 305ರೂ. ಬಾಕಿ ಹಣವನ್ನು ರೈತರಿಗೆ ನೀಡಲಾಗುವುದು ಎಂದು ಘೋಷಿಸಿದ್ದರು ಆದರೂ ಇವರೆಗೆ ಈ ಬಗ್ಗೆ ಚಕಾರವೆತ್ತದೆ ಪ್ರಸ್ತುತ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ದಿ.30ರ ಒಳಗೆ ಕಬ್ಬಿನ ಬಾಕಿ ಮೊತ್ತದೊಂದಿಗೆ 2017-18ನೇ ಸಾಲಿನ ಪ್ರತಿ ಟನ್ ಕಬ್ಬಿಗೆ ದರ ನಿಗದಿ ಮಾಡಬೇಕು ಇಲ್ಲದಿದ್ದಲ್ಲಿ ಕಂಪೆನಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಬೃಹತ್ ಹೋರಾಟ ನಡೆಸಲಾಗುವುದು ಜೊತೆಗೆ ಹಳಿಯಾಳದ ಕಬ್ಬನ್ನು ಬೆರೆ ಕಂಪೆನಿಗಳಿಗೆ ಸಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಅಲ್ಲದೇ ಬರಗಾಲದಿಂದ ರೈತರು ತತ್ತರಿಸಿದ್ದು ಆರ್ಥಿಕ ಸಂಕಷ್ಟದಲ್ಲಿದ್ದು ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆಯೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಳಿಯಾಳ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರಾದ ಶಂಕರ ಕಾಜಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಖಜಾಂಚಿ ಗಿರಿಶ ಟೋಸುರ, ರಾಜ್ಯ ಉಪಾಧ್ಯಕ್ಷ ಎಮ್.ವಿ.ಘಾಡಿ, ಎಸ್.ಕೆ ಗೌಡಾ, ಸಾತೂರಿ ಗೋಡಿಮನಿ, ಮಂಜು ಬೆಡದೊಳಕರ ಇನ್ನಿತರರು ಇದ್ದರು.
Leave a Comment