ಹಳಿಯಾಳ:- ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ.7 ಹಳಿಯಾಳಕ್ಕೆ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳ ಕುರಿತು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿಗಳು, ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪೂರ್ವಭಾವಿ ಸಭೆ ನಡೆಸಿದರು. ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಂದ ಅಭಿವೃದ್ದಿ ಕಾಮಗಾರಿಗಳ, ಕೈಗೊಳ್ಳಲಾಗುವ, ಉಧ್ಘಾಟನೆಗೊಳ್ಳಲಿರುವ, ಶಂಕುಸ್ಥಾಪನೆ ಮಾಡಲಿರುವ ಕಾಮಗಾರಿಗಳ ಕುರಿತು ಮಾಹಿತಿಯನ್ನು ಪಡೆದರಲ್ಲದೇ ಮುಖ್ಯಮಂತ್ರಿಯವರು ಆಗಮಿಸುವ ಸಂದರ್ಭದಲ್ಲಿ ಆಯಾ ಕಾಮಗಾರಿಗಳ ಪೂರ್ತಿ ವಿವರಗಳೊಂದಿಗೆ ನಾಮಫಲಕಗಳನ್ನು ಶಂಕುಸ್ಥಾಪನೆಯ ಸಂದರ್ಭದಲ್ಲಿ ಅಳವಡಿಸಬೇಕೆಂದು ಹಾಗೂ ಕಾಮಗಾರಿಗಳು ಪೂರ್ಣಗೊಂಡ ನಂತರ ಅವುಗಳನ್ನು ಆಯಾ ಕಾಮಗಾರಿಗಳ ಉಧ್ಘಾಟನೆಯ ಸಂದರ್ಭದಲ್ಲಿ ಸ್ಥಾಪಿಸುವಂತೆ ಆದೇಶಿಸಿದರು. ದಿ.7 ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಹಳಿಯಾಳ ಕ್ಷೇತ್ರದ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ 7324 ಲಕ್ಷ ರೂ. ಮೊತ್ತದ 32 ಕಾಮಗಾರಿಗಳ ಉಧ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನೇರವೆರಲಿದೆ ಮಾತ್ರವಲ್ಲದೇ ನೂರಾರು ಫಲಾನುಭವಿಗಳಿಗೆ ಪರಿಹಾರ ಚೆಕ್, ಪಟ್ಟಾ ವಿತರಣೆ ಇನ್ನಿತರ ಕಾರ್ಯಕ್ರಮ ಸಿಎಂ ಅವರಿಂದ ಸಾಂಕೇತಿಕವಾಗಿ ನೆರವೆರಲಿದೆ ಎಂದು ದೇಶಪಾಂಡೆ ಹೇಳಿದರು. ಪಟ್ಟಣದ ಇಂಜೀನಿಯರಿಂಗ್ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದ್ದು ಅಲ್ಲಿಂದ ಅರಣ್ಯ ಇಲಾಖೆಯವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಬಳಿಕ ಸಂಜೆ 4 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಬೃಹತ್ ಸಭೆ ನಡೆಯಲಿದ್ದು ಸಿಎಂ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆಂದರು. ಕಾರ್ಯಕ್ರಮದ ದಿನ ಯಾವುದೇ ತೊಂದರೆ ಆಗದಂತೆ ಪೋಲಿಸ್ ಇಲಾಖೆ ನಿಗಾವಹಿಸಬೇಕು ಹಾಗೂ ಕೆಎಸ್ಆರ್.ಟಿಸಿ ಅವರು ಗ್ರಾಮೀಣ ಭಾಗಕ್ಕೆ ತೆರಳುವವರಿಗೆ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ಅನುವು ಮಾಡಿಕೊಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟಿಲ್, ಎಸಿ ಶಿವಾನಂದ ಕರಾಳೆ, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನಾಯ್ಕ, ತಹಶೀಲ್ದಾರ್ರಾದ ವಿದ್ಯಾಧರ ಗುಳಗುಳಿ, ಟಿಸಿ ಹಾದಿಮನಿ ಸೇರಿದಂತೆ ಹಳಿಯಾಳ-ಜೋಯಿಡಾ-ದಾಂಡೇಲಿಯ ಅಧಿಕಾರಿಗಳು, ಜಿ.ಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ,. ತಾಪಂ ಅಧ್ಯಕ್ಷೆ ರೀಟಾ ಸಿದ್ದಿ ಸೇರಿದಂತೆ ಗ್ರಾಪಂ,ತಾಪಂ, ಜಿಪಂ ಹಾಗೂ ಪುರಸಭೆಯ ಜನಪ್ರತಿನಿಧಿಗಳು ಹಾಜರಿದ್ದರು.
Leave a Comment