ಹೊನ್ನಾವರ: ಕಡತೋಕ ಮಂಜುನಾಥ ಬಾಗವತ ಮತ್ತು ಹೊಸ್ತೋಟ ಮಂಜುನಾಥ ಭಾಗವತ ಅವರು ರಚಿಸಿದ ಯಕ್ಷಗಾನ ಪ್ರಸಂಗಗಳು ಸಮಗ್ರ ಅಧ್ಯಯನವಾಗದೇ ಅವಗಣನೆ ಆಗುತ್ತಿದೆ. ರಾಜ್ಯದ ಶೈಕ್ಷಣಿಕ ಪಠ್ಯದಲ್ಲಿ ಇವರ ಪ್ರಸಂಗಗಳನ್ನು ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಸ್ಪಷ್ಟತೆ ಮೂಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಚಿಂತಕರೆಲ್ಲ ಸೇರಿ ಸರಕಾರದ ಮೇಲೆ ಒತ್ತಡ ಹೇರಬೇಕಾದ ತುರ್ತು ಇದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಹಳದೀಪುರದಲ್ಲಿ ಹಿರಿಯ ಭಾಗವತ, ಪ್ರಸಂಗಕರ್ತ ದಿ. ಕಡತೋಕ ಮಂಜುನಾಥ ಭಾಗವತ ಅವರ ನೆನಪಿನಲ್ಲಿ ಹಮ್ಮಿಕೊಂಡ ಐದನೇ ವರ್ಷದ ಯಕ್ಷರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಲಾಗಾಯ್ತಿನಿಂದ ಕನ್ನಡವನ್ನು ಸಶಕ್ತವಾಗಿ ದುಡಿಸಿಕೊಂಡ ಯಕ್ಷಗಾನ ಪ್ರಸಂಗ ಸಾಹಿತ್ಯ ಅಳಿಯುತ್ತದೆ ಎಂದು ಆತಂಕಪಡಬೇಕಾಗಿಲ್ಲ. ಹಾಗಂದ ಮಾತ್ರಕ್ಕೆ ನಾವು ಯಕ್ಷಗಾನವನ್ನು ಗಂಭೀರವಾಗಿ ಒಳಗೊಳಿಸಿಕೊಳ್ಳದಿದ್ದರೆ ನಾಮ್ಮೊಳಗಿನ ಯಕ್ಷಗಾನದ ಕಸು ಅಳಿಯುತ್ತದೆ. ಹಾಗಾಗಿ ಇದರ ಬಗ್ಗೆ ಚಿಂತಿಸಬೇಕಾದದ್ದು ಎಲ್ಲರ ಜವಾಬ್ದಾರಿ ಎಂದು ಅರವಿಂದ ಕರ್ಕಿಕೋಡಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷರಂಗ ಮಾಸಪತ್ರಿಕೆ ಸಂಪಾದಕ ಕಡತೋಕ ಗೋಪಾಲಕೃಷ್ಣ ಭಾಗವತ ಯಕ್ಷಗಾನ ಕ್ಷೇತ್ರಕ್ಕೆ ಪ್ರಯೋಜನವಾಗುವಂತಹ ಕೆಲಸಗಳನ್ನು ಪ್ರತಿ ವರ್ಷವೂ ಮಾಡುವ ಉದ್ದೇಶದಿಂದ ಈ ಯಕ್ಷರಂಗೋತ್ಸವವನ್ನು ಪ್ರತಿವರ್ಷವೂ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿ ಮಕ್ಕಳ ಯಕ್ಷಗಾನ, ಮಹಿಳೆಯರ ಯಕ್ಷಗಾನ, ತಾಳಮದ್ದಳೆ ಈ ಎಲ್ಲ ಪ್ರಕಾರಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶ ಮಾತ್ರವಲ್ಲ, ಯಕ್ಷಗಾನದ ಸಾಂಪ್ರದಾಯಿಕ ಸತ್ವ ಅಳಿದು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತೀಯ ಸಂಗೀತದಲ್ಲಿ ವಿಶಿಷ್ಟವಾದ ಯಕ್ಷಗಾನ ಸಂಗೀತದ ಸ್ವರೂಪ ಮತ್ತು ಅದರ ಅನನ್ಯತೆಯನ್ನು ದಾಖಲಿಸುವ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ಗಣೇಶ ಪೈ, ಉದ್ಯಮಿ ದಾಮೋದರ ಜಿ. ನಾಯ್ಕ ವಿರೂಪಾಕ್ಷ ಹೆಗಡೆ ಶೀಗೇಹಳ್ಳಿ ಆಗಮಿಸಿ ಶುಭ ಹಾರೈಸಿದರು.
ಲೀಲಾ ಗಣಪತಿ ಟ್ರಸ್ಟ್ ಅಧ್ಯಕ್ಷ ಡಾ. ಜಿ.ಜಿ. ಸಬಾಹಿತ್ ಅಧ್ಯಕ್ಷತೆ ವಹಿಸಿದ್ದರು.
ಎಂ.ಎಂ.ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.
Leave a Comment