ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ನಿಮಿತ್ತ ಚರ್ಚ್ಗಳ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಿದ್ದವು. ಚರ್ಚ್ಗಳ ಅಂಗಳದಲ್ಲಿ ವಿಶೇಷವಾಗಿ ಗೋದಲಿಯನ್ನು ನಿರ್ಮಿಸಿ, ಕುರಿಗಾಯಿ, ಏಸು ಹಾಗೂ ರಾಜರುಗಳ ಬೊಂಬೆಗಳನ್ನು ಜೋಡಿಸಿಡಲಾಗಿತ್ತು. ಕಾರವಾರದ ಐತಿಹಾಸಿಕ ಹೈ ಚರ್ಚ್, ಕ್ಯಾಥಡ್ರಲ್, ಸುಂಕೇರಿ ಚರ್ಚ್ಗಳು ಸೇರಿದಂತೆ ಹಲವಾರು ಚರ್ಚ್ಗಳಲ್ಲಿ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ವಿಶೇಷ ಪ್ರಾರ್ಥನೆ ಹಾಗೂ ಬಲಿಪೂಜೆ ನಡೆಯಿತು. ವಿವಿಧ ಚರ್ಚ್ನ ಧರ್ಮಗುರುಗಳು ರಾತ್ರಿ ಬಾಲ ಏಸುವನ್ನು ಗೋದಲಿಯಲ್ಲಿ ಇರಿಸಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಸೇರಿದ್ದ ನೂರಾರು ಜನ ಕ್ಯಾರಲ್ ಗೀತೆಗಳನ್ನು ಹಾಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕ್ರಿಸ್ಮಸ್ ಹಬ್ಬ ಪವಿತ್ರ ಸಂದೇಶದ ಕುರಿತು ಪ್ರವಚನ ನೀಡಿದ ಇಲ್ಲಿನ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಡೆರಿಕ್ ಫರ್ನಾಂಡಿಸ್, ಸಮಾಜದಲ್ಲಿ ಎಲ್ಲರೂ ಸಾಮರಸ್ಯ, ಸಹಬಾಳ್ವೆಯಿಂದ ಜೀವನ ನಡೆಸಿದರೆ ಅದೇ ಮಾನವ ಜೀವನದ ಸಾರ್ಥಕತೆ. ಪ್ರೀತಿಯನ್ನು ಪ್ರತಿಯೊಬ್ಬರೂ ಹಂಚುವ ಜತೆಗೆ, ಸ್ನೇಹ ಗೌರವವನ್ನು ಗಳಿಸಬೇಕು ಎಂದು ಕರೆ ನೀಡಿದರು. ಕ್ರಿಶ್ಚಿಯನ್ ಸಮುದಾಯದವರು ಹೊಸ ಬಟ್ಟೆ ತೊಟ್ಟು ಸೋಮವಾರ ಬೆಳಿಗ್ಗೆ ಚರ್ಚ್ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮನೆಯಲ್ಲಿ ಮಾಡಿದ ಚಕ್ಕುಲಿ, ನವರಿ ತರಹೇವಾರಿ ತಿಂಡಿಗಳನ್ನು ನೆರೆಹೊರೆ ಹಾಗೂ ಸಂಬಂಧಿಕರಿಗೆ ನೀಡಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
Leave a Comment