ಹಳಿಯಾಳ: ಕಳೆದ 2 ವರ್ಷಗಳಿಂದ ಮಹದಾಯಿ ನದಿ ಜೋಡಣೆ, ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಉತ್ತರಕರ್ನಾಟಕದ ಜನತೆ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು ಸರ್ಕಾರ ಕೂಡಲೇ ರೈತರ ಬೇಡಿಕೆ ಈಡೇರಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಪಟ್ಟಣದ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಸಂಘಟನೆಯವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಉತ್ತರ ಕರ್ನಾಟಕದಲ್ಲಿ ಕಳೆದ 2 ವರ್ಷಗಳಿಂದ ರೈತರು ಮಹದಾಯಿ ನದಿ-ಜೋಡಣೆ, ಕಳಸಾಬಂಡೂರಿ ನಾಲಾಯೋಜನೆ ಅನುಷ್ಥಾನಕ್ಕೆ ಒತ್ತಾಯಿಸಿ ಹೋರಾಟ ನಡೆಯುತ್ತಿದ್ದರು ಸಹ ಸರ್ಕಾರ ಕೈಕಟ್ಟಿ ಕೂಳಿತಿರುವುದನ್ನು ನಾವು ಖಂಡಿಸುತ್ತೇವೆ. ರೈತರು ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು, ವಿರೋದ ಪಕ್ಷದವರು ಒಬ್ಬರ ಮೇಲೆ ಒಬ್ಬರು ಅಪವಾದ ಹೊರಿಸುತ್ತ ಕಾಲ ಕಳೆಯುವದನ್ನು ಬಿಟ್ಟು ಸಮಸ್ಯೆ ಪರಿಹಾರ ಮಾಡುವಲ್ಲಿ ಗಮನ ಹರಿಸಬೇಕು. ರಾಜ್ಯದಲ್ಲಿ ಈ ವರ್ಷವು ಬರಗಾಲದ ಪರಿಸ್ಥಿತಿ ಇದ್ದು ಇಂಥ ಪರಸ್ಥಿತಿಯಲ್ಲಿ ರಾಜಕೀಯ ಮಾಡದೇ ಸರ್ಕಾರ ಈ ಯೋಜನೆ ಬಗ್ಗೆ ಎಚ್ಚೆತ್ತು ಕೆಲಸ ಮಾಡಲಿ. ರೈತರು ಯಾವುದೇ ಕಾರಣಕ್ಕೂ ಹೋರಾಟ ಕೈ ಬಿಡಬಾರದು ಎಂದು ಮನವಿ ಮಾಡಿರುವ ಜಯಕರ್ನಾಟಕ ಸಂಘಟನೆ ಹಳಿಯಾಳ ಘಟಕದವರು ಸರಕಾರ ಈ ಯೋಜನೆಯ ಬಗ್ಗೆ ಕೂಡಲೆ ಕ್ರಮ ಕೈಗೊಂಡು ಶಿಘ್ರವಾಗಿ ಸದರ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ದುರ್ಗಪ್ಪಾ, ವಿನೋದ ಗಿಂಡೆ, ಗಣೇಶ ಗೊಸಪ್ಪನವರ ಮೊದಲಾದವರು ಇದ್ದರು.
Leave a Comment