ಹಳಿಯಾಳ: ಮರಾಠಾ ಸಮುದಾಯವನ್ನು ಪ್ರವರ್ಗ 3ಯಿಂದ ಪ್ರತ್ಯೇಕಗೊಳಿಸಿ ಪ್ರವರ್ಗ 2ಎ ದಲ್ಲಿ ಸೇರ್ಪಡೆಗೊಳಿಸಬೇಕು ಹಾಗೂ ಸಮಾಜದ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈಗಾಗಲೇ ಬೃಹತ್ ಪ್ರತಿಭಟನೆ ಸೇರಿದಂತೆ ನೂರಾರು ಬಾರಿ ಸರ್ಕಾರದ ಗಮನ ಸೆಳೆದರು ತಮ್ಮ ಬೇಡಿಕೆ ಈಡೇರಿಸದ ಕಾರಣ ಜನವರಿ ದಿ.29 ರಂದು ದಾಂಡೇಲಿ ನಗರದಲ್ಲಿ “ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ ಮೋರ್ಚಾ” ಅಡಿ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ತಾಲೂಕಾಧ್ಯಕ್ಷ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದ ಮರಾಠಾ ಭವನದ ಮೈದಾನದಲ್ಲಿ ಶನಿವಾರ ನಡೆದ ಮರಾಠಾ ಸಮಾಜದ ಸಭೆಯಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಿದ ಘೊಟ್ನೇಕರ ಅವರು ಕರ್ನಾಟಕದಲ್ಲಿನ ಮರಾಠಾ ಸಮಾಜದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಮರಾಠಾ ಸಮುದಾಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಶಂಕರಪ್ಪನವರು ಅಧ್ಯಯನ ಮಾಡಿ ನೀಡಿದ ಶಿಫಾರಸ್ಸಿನಂತೆ ಪ್ರವರ್ಗ 3ಬ ದಿಂದ ಪ್ರತ್ಯೇಕಗೊಳಿಸಿ ಪ್ರವರ್ಗ 2ಅ ದಲ್ಲಿ ಸೇರ್ಪಡೆಗೊಳಿಸಬೇಕೆಂದು ಈಗಾಗಲೇ ರಾಜ್ಯದೆಲ್ಲೆಡೆ ಮರಾಠಾ ಸಮುದಾಯದಿಂದ ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ(ಮೌನ) ಮೋರ್ಚಾ ಬೃಹತ್ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದರ ಮೂಲಕ ಸರ್ಕಾರದ ಗಮನ ಸೆಳೆದಿದ್ದರೂ ಸಹಿತ ಈವರೆಗೆ ಮರಾಠಾರ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮರಾಠಾ ಸಮಾಜದಿಂದ ಮೌನ ಪ್ರತಿಭಟನೆ ಮಾತ್ರ ಮಾಡಲಾಗುತ್ತಿದ್ದು ತಮ್ಮ ಪ್ರಮುಖ ಮೀಸಲಾತಿ ಬೇಡಿಕೆ ಈಡೇರದೆ ಇದ್ದರೇ ತಾಲೂಕಾ ಕಚೇರಿಗಳ ಎದುರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಬಗ್ಗೆಯು ಚರ್ಚಿಸಲಾಗುತ್ತಿದ್ದು ದಿ.29 ರ ಒಳಗೆ ಬೇಡಿಕೆ ಈಡೇರದೆ ಇದ್ದರೇ ಆ ದಿನ ಹಳಿಯಾಳ-ಜೋಯಿಡಾ-ದಾಂಡೆಲಿ ಒಳಗೊಂಡು ಹಳಿಯಾಳ ವಿಧಾನಸಭಾ ಕ್ಷೇತ್ರದ ಮರಾಠಾರ ಬೃಹತ್ ಹೋರಾಟ ದಾಂಡೇಲಿಯಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಉಡಚಪ್ಪಾ ಬೋಬಾಟಿ, ಎಲ್.ಎಸ್.ಅರಿಶೀನಗೇರಿ, ಅಪ್ಪಾರಾವ ಪೂಜಾರಿ, ಅರುಣ ಬೋಬಾಟಿ, ಮಂಗಲಾ ಕಶೀಲಕರ, ಭಾರತಿ ಬೀರ್ಜೆ, ಕೃಷ್ಣಾ ಶಾಪುರಕರ, ಶಂಕರ ಬೆಳಗಾಂವಕರ, ಅನಿಲ ಚವ್ವಾಣ, ದೇಮಾಣಿ ಶೀರೋಜಿ ಇತರರು ಇದ್ದರು.
Leave a Comment