ಹಳಿಯಾಳ: ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್, ಬೆಂಗಳೂರು,ಹಳಿಯಾಳ ತಾಲೂಕಾ ಘಟಕ, ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ಹಾಗೂ ಉತ್ತರ ಕನ್ನಡ ಸಮಗ್ರ ಅಭಿವೃದ್ದಿ ಯೋಜನೆ(ಉತ್ಕರ್ಷ)ರವರ ಸಂಯುಕ್ತಾಶ್ರಯದಲ್ಲಿ ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ನ ಹಳಿಯಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಶ್ರೀಕಾಂತ ಘೋಟ್ನೆಕರ ತಿಳಿಸಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟವನ್ನು ಹಳಿಯಾಳದಲ್ಲಿ ಪ್ರಪ್ರಥಮಬಾರಿಗೆ ಮ್ಯಾಟ್ ಮೇಲೆ ನಡೆಸಲಾಗುವುದು. ದೇಶದ ಪ್ರತಿಷ್ಠಿತ ಕಬಡ್ಡಿ ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೋಂದಣಿಮಾಡಿಕೊಂಡಿದ್ದು ಪ್ರಮುಖವಾಗಿ ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪುನೆ, ಕರ್ನಾಟಕ, ಗೋವಾ, ಉತ್ತರಕನ್ನಡದ ಎರಡು ಅತ್ಯುತ್ತಮ ತಂಡಗಳು ಮತ್ತು ಇತರೆ ರಾಜ್ಯಗಳ ಕ್ಲಬ್ ತಂಡಗಳು ಭಾಗವಹಿಸುತ್ತಿರುವುದಾಗಿ ವಿವರಿಸಿದ ಅವರು ವಿಶೆಷವಾಗಿ ಈ ತಂಡಗಳಲ್ಲಿ ಪ್ರೋ ಕಬಡ್ಡಿ ಆಡಿದ ಆಟಗಾರರು ಭಾಗವಹಿಸುತ್ತಿದ್ದು, ಆಟಗಾರರು, ತಂಡದ ಮ್ಯಾನೇಜರ, ಕೋಚ್ ಮತ್ತು 20 ನಿರ್ಣಾಯಕರುಗಳಿಗೆ ಎರಡು ದಿನಗಳ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು. ಶನಿವಾರ ದಿ. 3ರಂದು ಸಾಯಂಕಾಲ 4 ಗಂಟೆಗೆ ಪಂದ್ಯಾಟಕ್ಕೆ ಸಚಿವ ಆರ್. ವಿ. ದೇಸಪಾಂಡೆ ಚಾಲನೆ ನೀಡಲಿದ್ದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ, ನಾಯಕರಾದ ಪ್ರಶಾಂತ ದೇಶಪಾಂಡೆ, ಪ್ರಸಾದ ದೇಶಪಾಂಡೆ, ಸೂರಜ ನಾಯ್ಕ ಸೋನಿ ಉಪಸ್ಥಿತರಿರುವರು. ಕ್ರೀಡಾಕೂಟದಲ್ಲಿ ವಿಶೇಷವಾಗಿ ಯೂ ಮುಂಬಾ ತಂಡದ ಕೋಚ್ ರವಿ ಶೆಟ್ಟಿ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ, ಕರ್ನಾಟಕ ಕಬಡ್ಡಿ ರೆಫರಿ ಬೋರ್ಡ ಅಧ್ಯಕ್ಷ ಎಂ. ಶಣ್ಮುಗಂ ಆಗಮಿಸಲಿದ್ದಾರೆ ಎಂದು ತಿಳಿಸಿದ ಶ್ರೀನಿವಾಸ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ 1,50,000/- ಪ್ರಥಮ, 1,00,000/- ರೂ ದ್ವಿತೀಯ, 65,000/- ತೃತೀಯ ಮತ್ತು 65000ರೂ ಚತುರ್ಥ ನಗದು ಬಹುಮಾನಗಳೊಂದಿಗೆ ಆಕರ್ಶಕ ಟ್ರೊಪಿಯನ್ನೂ ನೀಡಲಾಗುದು. ಅದೆ ರೀತಿ ವೈಯಕ್ತಿಕ 5 ಬಹುಮಾನಗಳನ್ನು ತಲಾ ರೂ 10,000/-ದಂತೆ ಪ್ರತ್ಯೇಕವಾಗಿ ನೀಡಲಾಗುವುದು ಎಂದು ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಉಪಾಧ್ಯಕ್ಷ ಸುಭಾಸ ಕಾಮ್ರೆಕರ, ದಿನೇಶ ನಾಯ್ಕ, ಸಂಜು ಅಸೂಕರ, ಶಂಕರ ದೇಸೂರಕರ ಇದ್ದರು.
Leave a Comment