ಹಳಿಯಾಳ:- ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆಗೊಂಡಿದ್ದ ದಾಂಡೇಲಿಯ ಕಾಳಿನದಿಯಿಂದ ಹಳಿಯಾಳದ ಕೆರೆಗಳಿಗೆ ನೀರು ತುಂಬಿಸುವ 220ಕೋಟಿ ರೂ. ಬೃಹತ್ ಮೊತ್ತದ ಕಾಳಿ ಏತನೀರಾವರಿ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ಐತಿಹಾಸಿಕ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ತಾಲೂಕಿನ ಯಡೋಗಾ ಗ್ರಾಮದ ಕೆರೆಯ ಪಕ್ಕದ ಕೃಷಿ ಜಮೀನಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿ ತಾಲೂಕಿನ ರೈತರ ಹಲವು ವರ್ಷದ ಮುಖ್ಯ ಬೇಡಿಕೆಯಾದ ಈ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವಲ್ಲಿ ಇದ್ದ ಹಲವಾರು ತಾಂತ್ರಿಕ ತೊಂದರೆಗನ್ನು ನಿವಾರಿಸಲಾಗಿದೆ ಅಲ್ಲದೇ ವಿರೋಧ ಪಕ್ಷದವರ ರಾಜಕೀಯಕ್ಕೆ ಕಿವಿಗೊಡದೆ ರೈತರ ಹಿತದೃಷ್ಠಿಯಿಂದ ಯೋಜನೆ ಜಾರಿ ಮಾಡಲಾಗಿದೆ ಎಂದ ದೇಶಪಾಂಡೆ ಯೋಜನೆಯಿಂದ ಸುಮಾರು 46 ಕೆರೆಗಳು ಹಾಗೂ 19 ಬಾಂದಾರಗಳಿಗೆ ನೀರು ತುಂಬಿ ಸುಮಾರು 7000 ಹೆಕ್ಟೇರ್ ಜಮೀನಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ಜನರ ಕುಡಿಯುವ ನೀರಿನ ಸಮಸ್ಯೆಗೂ ಸಹ ಶಾಶ್ವತ ಪರಿಹಾರ ಕಂಡುಕೊಂಡಂತಾಗುತ್ತದೆ ಮತ್ತು ಅಂತÀರ್ಜಲ ಮಟ್ಟವೂ ಸಹ ಏರಿಕೆಯಾಗುತ್ತದೆ ಎಂದರು. ನೀರಾವರಿಯಿಂದ 365 ದಿನ ಕೆರೆಗಳಿಗೆ ನೀರು ತುಂಬುವುದರಿಂದ ರೈತರು ಒಂದಕ್ಕಿಂತ ಹೆಚ್ಚಿನ ಬೆಳೆಯನ್ನು ಬೆಳೆಸಬಹುದಾಗಿದೆ ಅದರಂತೆ ತೊಟಗಾರಿಕೆ, ರೇಷ್ಮೇ, ಮೀನುಗಾರಿಕೆ, ಮುಂತಾದ ಬೆಳೆಗಳನ್ನು ಬೆಳೆಸಬಹುದಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ರೈತರಿಗೆ ಮಾರ್ಗದರ್ಶನ ನೀಡಬೇಕು ಹಾಗೂ ಹನಿ ನೀರಾವರಿಗೆ ಪ್ರೋತ್ಸಾಹನ ನೀಡುವಂತೆ ಸಲಹೆ ನೀಡಿದರು. ತಾಲೂಕಿನ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಈ ಐತಿಹಾಸಿಕ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ರೈತರು, ಗ್ರಾಮೀಣ ಭಾಗದ ಜನರು ಒಳ್ಳೆಯ ಗುಣಮಟ್ಟದ ಕೆಲಸವಾಗುವಂತೆ ನೊಡಿಕೊಳ್ಳಬೇಕು ಹಾಗೂ ಪೈಪಲೈನ್ ಅಳವಡಿಸುವಾಗ ರೈತರು ಗುತ್ತಿಗೆದಾರರಿಗೆ ಸಹಕರಿಸುವಂತೆ ವಿನಂತಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಈ ಯೋಜನೆ ಚುನಾವಣೆ ಗಿಮಿಕ್ ಎಂದು ಹೇಳುವ ವಿರೋಧಪಕ್ಷದವರ ಬಾಯಿಗೆ ಬೀಗಬಿದ್ದಿದ್ದು ಸಚಿವರ ಮುಂದಾಲೋಚನೆಯಿಂದ ಈಗಾಗಲೇ ಹಳಿಯಾಳ-ಜೋಯಿಡಾ ಕ್ಷೇತ್ರದ 120 ಕೆರೆಗಳ ಹೂಳನ್ನು ತೆಗೆಯಲಾಗಿದ್ದು ಕೆರೆಗಳಲ್ಲಿ ಹೆಚ್ಚಿನ ನೀರು ಶೇಖರಣೆಗೊಂಡು ರೈತರಿಗೆ ಕುಡಿಯಲು ಹಾಗೂ ನೀರಾವರಿಗೆ ನೀರಿನ ಕೊರತೆ ದೂರಾಗಲಿದೆ ಎಂದ ಅವರು ವಿರೋಧಪಕ್ಷದವರು ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಬುದ್ದಿಭ್ರಮಣೆಯಾದವರಂತೆ ಮಾತನಾಡುತ್ತಿದ್ದು ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದರು. ಕಾರ್ಯಕ್ರಮದಲ್ಲಿ ಯಡೋಗಾ ಸಿದ್ದಾರೂಢಮಠದ ಮಾತೆ ನಿರ್ಮಲಾದೇವಿ ಸಾನಿಧ್ಯವಹಿಸಿದ್ದರು. ಯಡೋಗಾ ಹಾರವಳ್ಳಿ ಮಠದ ಯೋಗಿ ರಾಮನಾಥಜಿ, ಜಿಪಂ ಉಪಾಧ್ಯಕ್ಷ ಸಂತೊಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ತಾಪಂ ರೀಟಾ ಸಿದ್ದಿ,ಉಪಾಧ್ಯಕ್ಷೆ ಲೀಲಾ ಮಡಿವಾಳ, ಬ್ಲಾಕ್ ಅಧ್ಯಕ್ಷ ಸುಭಾಷ ಕೊರ್ವೆಕರ, ರೈತ ಮುಖಂಡರಾದ ಸಂಜು ಮಿಶಾಳಿ, ಬಾಬು ಪಾಗೊಜಿ, ವಿಜಯ ಘಾಟಗೆ, ರಾಬರ್ಟ ಕೆರವಾಡಕರ, ಹನುಮಂತ ದಬಾಲಿ, ಪಾಂಡುರಂಗ ಪಾಟೀಲ್, ಶಿವಪುತ್ರಪ್ಪಾ ನುಚ್ಚಂಬ್ಲಿ, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು ಇತರರು ಇದ್ದರು.
Leave a Comment