ಹೊನ್ನಾವರ: ಸಂಘಟನೆಯ ಮೂಲಕ ಅಭಿವೃದ್ಧಿ ಸಾಧಿಸಬೇಕು, ಸಮಾಜದ ಮೇಲೆ ಆಗುವ ದೌರ್ಜನ್ಯವನ್ನು ಖಂಡಿಸಿ ಪ್ರತ್ಯುತ್ತರವನ್ನು ನೀಡಬೇಕು ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ, ಬಿಜೆಪಿ ಮುಖಂಡ ನಾಗರಾಜ ನಾಯ್ಕ ತೊರ್ಕೆ ಹೇಳಿದರು. ಪಟ್ಟಣದ ಅಂಬೇಡ್ಕರ ಸಭಾಭವನದಲ್ಲಿ ನಡೆದ ತಾಲೂಕು ಮಡಿವಾಳರ ಸಂಘದ 18ನೇ ವಾರ್ಷಿಕ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದ ಪ್ರತಿಯೊಬ್ಬ ಮಕ್ಕಳು ಶಿಕ್ಷಣವನ್ನು ಪಡೆಯಬೇಕು. ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು. ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು. ವಿಶ್ವವಾಣಿ ವರದಿಗಾರ ಗೋಪಾಲಕೃಷ್ಣ ಭಟ್ ಮಾತನಾಡಿ, ಮಡಿವಾಳ ಸಮಾಜವು ಮಾಚಿದೇವರ ತತ್ವಾದರ್ಶಗಳೊಂದಿಗೆ ಅಭಿವೃದ್ಧಿ ಸಾಧಿಸುತ್ತಿದೆ. ಯುವಕರು ಕ್ರೀಯಾಶೀಲರಾಗಬೇಕು. ಇಂದು ಬ್ರಷ್ಟಾಚಾರ, ದಬ್ಬಾಳಿಕೆ ತಾಂಡವಾಡುತ್ತಿದೆ. ಇದರ ವಿರುದ್ದ ಹೋರಾಡಿ ಸಮಾಜದಲ್ಲಿ ನ್ಯಾಯ, ನೀತಿಯನ್ನು ಉಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಮಡಿವಾಳ, ಯುವ ಮುಖಂಡ ಗಜಾನನ ಮಡಿವಾಳ, ವಕೀಲ ಕಮಲಾಕರ ಮಡಿವಾಳ, ಸಂಘದ ಅಧ್ಯಕ್ಷ ನಾಗೇಶ ಮಡಿವಾಳ, ಉಪಾಧ್ಯಕ್ಷ ಅನಿಲ ಮಡಿವಾಳ ಮಾತನಾಡಿದರು. ಸಮಾಜದ ಹಿರಿಯ ಕಮಲಾಕರ ರಾಮಪ್ಪ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ಪಲ್ಲವಿ ಮಡಿವಾಳ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಿನಾಯಕ ಮಡಿವಾಳ ವರದಿ ವಾಚಿಸಿದರು. ಪ್ರಶಾಂತ ಮಡಿವಾಳ ವಂದನಾರ್ಪಣೆ ಮಾಡಿದರು. ಉಮೇಶ ಮಡಿವಾಳ ನಿರ್ವಹಿಸಿದರು. ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
Leave a Comment