ಹಳಿಯಾಳ : ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ಬೃಹತ್ ಮತ್ತು ಮಧ್ಯಮಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ಈ ಕುರಿತು ಮಾಧ್ಯಮಕ್ಕೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ತಮ್ಮ ಮನವಿ ಪತ್ರದಲ್ಲಿ “ತಾವು ಈ ಹಿಂದೆ ಇದೇ ವಿಷಯ ಕುರಿತು ಈ ವರ್ಷದ ಜ.5ರಂದು ತಮಗೆ ಬರೆದ ಪತ್ರಕೆ ್ಕಇಡೀ ದಕ್ಷಿಣ ಭಾರತದಲ್ಲಿ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಇದಕ್ಕೆ ವೃತ್ತಿಪರರು, ಗಣ್ಯರು ಮತ್ತು ರಾಜ್ಯಗಳ Àಉದ್ಯಮಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,’’ ಎಂದು ಹೇಳಿದ್ದಾರೆ. “ತುಂಬಾ ವಿಶಾಲ ರಾಷ್ಟ್ರವಾದ ಭಾರತವು ಈಗ ಸುಗಮ ಆಡಳಿತ, ಆಡಳಿತ ಸುಧಾರಣೆಗಳು, ರಾಷ್ಟ್ರೀಯ ಪುನಾರಚನೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಗಳಲ್ಲಿ ಸಂಪೂರ್ಣ ಪರಿವರ್ತನೆಯ ಹಾದಿಯಲ್ಲಿದೆ. ಹೀಗಿರುವಾಗ ಇಡೀ ದೇಶಕ್ಕೆ ಒಂದು ರಾಜಧಾನಿ ಸಾಲುವುದಿಲ್ಲ. ಬೆಂಗಳೂರು ದೇಶದ 2ನೇ ರಾಜಧಾನಿಯಾಗಲು ಅತ್ಯಂತ ಸೂಕ್ತ ಸ್ಥಳವಾಗಿದೆ,’’ ಎಂದು ದೇಶಪಾಂಡೆ ವಿವರಿಸಿದ್ದಾರೆ. “ಕಾಸ್ಮೊಪಾಲಿಟನ್ ನಗರವಾಗಿರುವ ಬೆಂಗಳೂರು ಪ್ರಾಕೃತಿಕ ವಿಕೋಪಗಳಿಂದ ದೂರವಾಗಿದ್ದು, ಹಿತಕರ ಹವಾಮಾನ ಹೊಂದಿದೆ. ಅಲ್ಲದೆ, ಬಾಹ್ಯ ಶತ್ರುಗಳ ಕಾಟದಿಂದಲೂ ಇದು ಮುಕ್ತವಾಗಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂಬುದು ಇಡಿ ದಕ್ಷಿಣ ಭಾರತೀಯರ ನ್ಯಾಯಬದ್ಧ ಭಾವನೆಯಾಗಿದೆ,’’ ಎಂದಿರುವ ಅವರು “ಬಹುಭಾಷಿಕ ಜನರು, ಶಾಸ್ತ್ರೀಯ ಭಾಷಾ ವಿದ್ವಾಂಸರು, ವೈವಿಧ್ಯಮಯ ವಿದೇಶಿ ವಿದ್ಯಾರ್ಥಿಗಳು ಮತ್ತು ದಕ್ಷ ವೃತ್ತಿಪರರಿಗೆ ಬೆಂಗಳೂರು ನೆಲೆಬೀಡಾಗಿದೆ. ಅಲ್ಲದೆ ಕೈಗಾರಿಕಾ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ನವೋದ್ಯಮಗಳಿಗೂ ಬೆಂಗಳೂರು ಆಡುಂಬೊಲವಾಗಿದೆ. ಕಾರಣ ಬೆಂಗಳೂರನ್ನು 2ನೇ ರಾಜಧಾನಿಯನ್ನಾಗಿ ಮಾಡಿ ಇಲ್ಲಿ ಸುಪ್ರೀಂಕೋರ್ಟಿನ ಪೀಠ ಮತ್ತು ಯುಪಿಎಸ್ಸಿ ಕಚೇರಿ ತೆಗೆದು, ಇಲ್ಲಿ ಸಂಸತ್ಅಧಿವೇಶನ ನಡೆಸುವುದರಿಂದ ದಕ್ಷಿಣ ಭಾರತ ಅಖಂಡವಾಗಿ ಒಂದುಗೂಡಲು ಸಾಧ್ಯವಾಗುತ್ತದೆ,’’ ಎಂದು ದೇಶಪಾಂಡೆ ತಮ್ಮ ಅಭಿಪ್ರಾಯ ಪ್ರಧಾನ ಮಂತ್ರಿಗಳಿಗೆ ತಿಳಿಸಿದ್ದಾರೆ.
Leave a Comment