ಹಳಿಯಾಳ: ಹಳಿಯಾಳ ಮತ್ತು ದಾಂಡೇಲಿಯಲ್ಲಿ ಬಡವರಿಗೆ ಅತ್ಯಂತ ಯೋಗ್ಯ ದರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಫಲಾನುಭವಿಗಳ ವಂತಿಗೆಯ ಮೂಲಕ ಮನೆಗಳನ್ನು ನಿರ್ಮಿಸುವ ಪಟ್ಟಣದ ಬಹುನಿರೀಕ್ಷಿತ ಜಿ.ಪ್ಲಸ್ ಟೂ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು 2 ತಾಲೂಕುಗಳಲ್ಲಿ ಎಕಕಾಲಕ್ಕೆ ಅಡಿಗಲ್ಲು ಸಮಾರಂಭ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೆಳಿದರು. ಪಟ್ಟಣದ ಪುರಸಭಾ ಭವನದಲ್ಲಿ ನಡೆದ ಆಶ್ರಯ ಸಮಿತಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಸಚಿವರು ಜಿ.ಪ್ಲಸ್ ಟೂ ಯೋಜನೆಯಲ್ಲಿ ಸುಮಾರು 503 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ಇಗಾಗಲೇ 204 ಮನೆಗಳ ನಿರ್ಮಾಣಕ್ಕೆ ಅರ್ಹರಿಂದ ವಂತಿಗೆಯ ಹಣದ ಸಮೇತ ಅರ್ಜಿಗಳು ಆಗಮಿಸಿದ್ದು ಇದಕ್ಕಾಗಿ ಫೆಬ್ರುವರಿ 23 ರಂದು ಮರು ಟೆಂಡರ್ ಕರೆಯಲಾಗಿದ್ದು ಜೊತೆಗೆ 26 ರಂದು ದಾಂಡೇಲಿಯ ಟೆಂಡರ್ ಕರೆಯಲಾಗಿದೆ. ಎರಡು ಟೆಂಡರ್ಗಳ ಪ್ರಕ್ರಿಯೆ ಮುಗಿದ ನಂತರ ಭೂಮಿ ಪೂಜೆ ನಡೆಸಲಾಗುವುದೆಂದರು. ಆಶ್ರಯ ಸಮಿತಿಯವರು ವಿಚಾರಣೆ ನಡೆಸಿ ಮನೆಗಳನ್ನು ಪಡೆದು ಪರಬಾರೆ ಮಾಡಿದ 196 ಮನೆಗಳನ್ನು ಗುರುತಿಸಿದ್ದಾರೆ. ಅದರಲ್ಲಿಯ 93 ಮನೆಗಳನ್ನು ಅರ್ಹ ಬಡವರಿಗೆ ನೀಡಲಾಗುವುದು. ಅಲ್ಲದೇ ಇನ್ನೂಳಿದ 103 ಮನೆಗಳ ದಾಖಲೆಗಳನ್ನು ಸಂಗ್ರಹಿಸಿ ಅವುಗಳಲ್ಲಿ ನೂನ್ಯತೆಗಳು ಕಂಡು ಬಂದಲ್ಲಿ ಅವುಗಳನ್ನು ಸಹ ಅರ್ಹ ಬಿಪಿಎಲ್ ಕಾರ್ಡ ಹೊಂದಿದ ಬಡವರಿಗೆ ನೀಡಲು ಮುಂದಾಗಿದ್ದೇವೆ ಎಂದು ಆಶ್ರಯ ಸಮಿತಿಯ ಸದಸ್ಯರು ಮತ್ತು ಪುರಸಭೆಯ ಅಧಿಕಾರಿಗಳು ಸಚಿವರ ಗಮನ ಸೆಳೆದರು. ಒಟ್ಟಿನಲ್ಲಿ ಆಶ್ರಯ ಮನೆಗಳ ಹಂಚಿಕೆಯಲ್ಲಿ ಯಾವುದೇ ಕಾನೂನು ಕಟ್ಟಡೆಗಳನ್ನು ಮೀರಬಾರದು ಮತ್ತು ಅರ್ಹ ಬಡವರಿಗೆ ಮನೆಗಳನ್ನು ನೀಡುವುದರ ಮೂಲಕ ಅವರಿಗೆ ಸೂರು ನೀಡುವಂತೆ ಆದೇಶಿಸಿದರು. ಆಶ್ರಯ ಮನೆಗಳನ್ನು ಪಡೆದು 20 ವರ್ಷಗಳನ್ನು ಪೊರೈಸಿದ ಹಾಗೂ ಇದೀಗ ಶಿತಿಲಾವಸ್ಥೆಯನ್ನು ತಲುಪಿರುವ ಅರ್ಹ ಬಡವರ ಮನೆಗಳ ನಿರ್ಮಾಣಕ್ಕೆ ಮುಂದಾಗುವಂತೆ ಸೂಚನೆ ನೀಡಿದ ಸಚಿವರು ಸಾಮಾನ್ಯ ವರ್ಗದ ಜನರಿಗೆ 1.20 ಲಕ್ಷ ರೂ ಸಹಾಯಧನ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಜನರಿಗೆ 1.80 ಲಕ್ಷ ರೂ ಅನುದಾನ ನೀಡಲಾಗುವುದು ಎಂದ ಅವರು ಆಶ್ರಯ ಕಮಿಟಿಯ ಸಭೆಯಲ್ಲಿ ಸರಿಯಾದ ರೀತಿಯಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸದೇ ಸಭೆಗೆ ಹಾಜರಾಗುವುದರ ಜೊತೆಗೆ ಅಸಮರ್ಪಕ ಉತ್ತರ ನೀಡಲು ಮುಂದಾದ ಪುರಸಭೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ಪುರಸಭೆ ಮತ್ತು ಸದಸ್ಯರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. ಆಶ್ರಯ ಮನೆಗಳ ಹಂಚಿಕೆ, ಜಿ ಪ್ಲಸ್ ಟೂ ಯೋಜನೆಯ ಜಾರಿಯಲ್ಲಿ ಪುರಸಭೆಯ ನಿರಾಸಕ್ತಿಯ ಪರಿಣಾಮ ಯಡವಿದ್ದು ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವಂತೆ ಸಚಿವರು ತಾಕೀತು ಮಾಡಿದರು. ಸಭೆಯಲ್ಲಿ ಆಶ್ರಯ ಸಮಿತಿಯ ಸದಸ್ಯರಾದ ಪರಶುರಾಮ ಹರ್ಲಿ, ಗುಲಾಭಶಾ ಲತೀಫನವರ ಮತ್ತು ಜಿ.ಡಿ.ಗಂಗಾಧರ ಇದ್ದರು.
Leave a Comment