ಹಳಿಯಾಳ ;
ಯುವಕರು ದುಶ್ಚಟಗಳಿಂದ ದೂರವಿದ್ದು ಕ್ರೀಡೆಗಳತ್ತ ಗಮನ ಹರಿಸಿ, ಶಾಲಾ ದಿನಗಳಲ್ಲಿಯೇ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕ್ರೀಡೆಯಿಂದ ಮಾತ್ರ ಜಾತಿ ಮತಗಳನ್ನು ಮರೆತು ನಾವೆಲ್ಲಾ ಒಂದೇ ಎನ್ನುವ ಭಾವನೆಯನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಿಸಿದರು. ಪಟ್ಟಣದ ಶ್ರೀ ಬಾಬು ಜಗಜೀವನರಾಮ್ ಸಭಾಭವನದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯವರು ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ರಾಜ್ಯದ ಚೈತನ್ಯ ಯೋಜನೆಯಡಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಸುಮಾರು 150 ಕ್ಕೂ ಅಧಿಕ ಯುವಕ ಮಂಡಳಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿ ಮಾತನಾಡಿ ರಾಜ್ಯ ಸರ್ಕಾರವು ಉತ್ತಮ ಕ್ರೀಡಾ ಪಟುಗಳಿಗೆ ಪ್ರೋತ್ಸಾಹನ, ಸಹಾಯಧನ ನೀಡಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ ಎಂದರು. ಪಟ್ಟಣದಲ್ಲಿ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಈಜುಕೋಳ ಮತ್ತು ಕುಸ್ತಿ ಆಧುನಿಕ ಅಖಾಡಾವನ್ನು ನಿರ್ಮಿಸಲು ಅನುದಾನ ಮಂಜೂರಿ ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ರಾಜ್ಯ ಸರ್ಕಾರವು ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರಕ್ಕೆ ಮಹತ್ವವನ್ನು ನೀಡಿದ್ದು ಇದಕ್ಕಾಗಿ ಬಜೆಟ್ದಲ್ಲಿ ವಿಶೇಷ ಅನುದಾನ ನೀಡಿದೆ ಎಂದ ಅವರು ಕ್ರೀಡೆಯು ದೇಹಕ್ಕೆ ವ್ಯಾಯಾಮ ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ನೀಡುತ್ತದೆ. 21ನೇ ಶತಮಾನದಲ್ಲಿ ಕ್ರೀಡೆ, ಆರೋಗ್ಯ ಮತ್ತು ಶಿಕ್ಷಣಕ್ಕೆ ಗೌರವವಿದೆ ಎಂದು ನುಡಿದ ಅವರು ಸರ್ಕಾರ ಹಲವಾರು ಕ್ರೀಡಾ ಶಾಲೆ, ಕ್ರೀಡಾಂಗಣಗಳ ನಿರ್ಮಾಣ, ಕ್ರೀಡಾಪಟುಗಳಿಗೆ ಹಾಸ್ಟೇಲ್, ವಿದೇಶಗಳಲ್ಲಿ ತರಬೇತಿ ನೀಡುವುದರ ಮೂಲಕ ಇನ್ನಷ್ಟು ಪ್ರೋತ್ಸಾಹ ನೀಡಿದೆ ಎಂದರು. ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಪಂ ಸದಸ್ಯ ಕೃಷ್ಣಾ ಪಾಟೀಲ್, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ ಉಪಾಧ್ಯಕ್ಷೆ ನೀಲವ್ವಾ ಮಡಿವಾಳ,ಮಂಜುಶ್ರೀ , ಪುರಸಭೆ ಸದಸ್ಯೆ ಮಾಲಾ ಬ್ರಿಗಾಂಜಾ, ಮಂಜುನಾಥ ರೇಡೆಕg, ಲಕ್ಷ್ಮಣ ರೇಡೆಕರ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಗಾಯಿತ್ರಿ ಇದ್ದರು.
Leave a Comment