ಹಳಿಯಾಳ: ಅಧಿಕಾರಿಗಳು ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯನಿರ್ವಹಿಸಿದರೇ ಮಾತ್ರ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡು ಕ್ಷೇತ್ರದ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ದೀಶೆಯಲ್ಲಿ ಹಳಿಯಾಳ ಹೆಸ್ಕಾಂ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದರು. ಪಟ್ಟಣದ ಡಾ.ಬಾಬು ಜಗಜೀವನರಾವ್ ಸಭಾಭವನದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಳಿಯಾಳ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದಿಂದ ಏರ್ಪಡಿಸಿದ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಕೃಷಿ ನೀರಾವರಿ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಿದ್ದರ ಕುರಿತ ತಾಲೂಕಿನ ರೈತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಕಾಂಗೈ ಸರ್ಕಾರದ ಅವಧಿಯಲ್ಲಿ 997 ಪಂಪಸೆಟ್ಗಳನ್ನು ಸಕ್ರಮಗೊಳಿಸಿದೆ. ರೈತರಿಂದ 1.30 ಕೋಟಿಯಷ್ಟು ಹಣ ತುಂಬಿಸಿಕೊಂಡು ಸರ್ಕಾರ 33.3 ಕೋಟಿ ಹಣ ಖರ್ಚು ಮಾಡಿ ಸುಮಾರು 651ಟಿಸಿಗಳನ್ನು ಅಳವಡಿಸಿ ವಿದ್ಯುತ್ ಸಮಸ್ಯೆಗೆ ಪರಿಹಾರ ಒದಗಿಸಿದೆ ಅದರಂತೆ ದಾಂಡೇಲಿಯ(ಜೋಯಿಡಾ) 122 ಪಂಪಸೆಟ್ಗಳನ್ನು ಸಕ್ರಮಗೊಳಿಸಿ ರೈತರಿಂದ 30ಲಕ್ಷ ಹಣ ಪಾವತಿಸಿಕೊಂಡು 2.25ಕೋಟಿ ಹಣ ಸರ್ಕಾರ ಪಾವತಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಗ್ರಾಮಾಂತರ ಭಾಗಗಳಲ್ಲಿ ಹೊಸ ತಂತಿಗಳ ಜೋಡಣೆ ಕಂಬಗಳ ಬದಲಾವಣೆ ಹೀಗೆ ಹಲವಾರು ರೀತಿಯ ಯೋಜನೆಗಳನ್ನು ರೈತರಿಗೆ ನೀಡಿದ್ದು ಇದನ್ನು ರೈತರು ಮರೆಯಬಾರದು ಎಂದು ಹೇಳಿದರು. ವಿಪ ಸದಸ್ಯ ಎಸ್ ಎಲ್ ಘೋಟ್ನೆಕರ ಮಾತನಾಡಿ ನರೇಂದ್ರ ಮೊದಿ ಅವರು ರೈತರ ವಿರೋಧಿ ಎಂದು ಟಿಕಿಸಿದರು. ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿಂದ್ರ ಮೆಟಗುಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ತಾ.ಪ ಅಧ್ಯಕ್ಷೆ ರೀಟಾ ಸಿದ್ದಿ ಉಪಾಧ್ಯಕ್ಷೆ ನಿಲವ್ವಾ ಮಡಿವಾಳ, ಜಿ.ಪಂ ಸದಸ್ಯರಾದ ಲಕ್ಷ್ಮಿ ಕೊರ್ವೆಕರ, ಕೃಷ್ಣಾ ಪಾಟೀಲ, ತಹಶೀಲ್ದಾರ ವಿದ್ಯಾಧರ ಗುಳುಗುಳಿ, ಇಓ ಲಕ್ಷ್ಮಣರಾವ್ ಯಕ್ಕುಂಡಿ, ದಾಂಡೇಲಿ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರ ಪುರುಶೋತ್ತಮ ಮಲ್ಯ. ಕೃಷಿ ಇಲಾಖೆಯ ಅಧಿಕಾರಿ ನಾಗೇಶ ನಾಯ್ಕ ಇದ್ದರು.
Leave a Comment