ಹಳಿಯಾಳ:-
ಹಳಿಯಾಳ:- ಸಾರಿಗೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ಮಾಡುವ ಮೂಲಕ ಜನರ ಪ್ರತಿಯೊಂದು ಅವಶ್ಯಕತೆಗೆ ಸ್ಪಂದಿಸಿದ್ದೇವೆ ಅಲ್ಲದೇ ಸಂಸ್ಥೆಗೆ ಹಾನಿಯಾದರು ಕೂಡ ಗ್ರಾಮೀಣ ಭಾಗದ ಜನರಿಗೆ ಉತ್ತಮವಾದ ಸೇವೆಯನ್ನು ನೀಡಿದ್ದೇವೆ ಕಾರಣ ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣಿಸುವ ಮೂಲಕ ಸಂಸ್ಥೆಯ ಪ್ರಗತಿಗೆ ಸಹಕರಿಸಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಅಲ್ಲೊಳ್ಳಿ ರಸ್ತೆಯಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ಘಟಕವನ್ನು ಉಧ್ಘಾಟಿಸಿ ಮಾತನಾಡಿದ ಸಚಿವರು ಹಳೆಯ ಬಸ್ ಘಟಕವನ್ನು ತೆರವುಗೊಳಿಸಿ ಅಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಆಧುನಿಕ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ರಾಜ್ಯದಲ್ಲಿಯೇ ಹಳಿಯಾಳ ಬಸ್ ನಿಲ್ದಾಣ ಮಾದರಿಯಾಗಲಿದೆ. ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರವು ದೇಶದಲ್ಲಿ ವಿನೂತನವಾದ ಯೋಜನೆ ಜಾರಿಗೊಳಿಸಿದೆ ಪ್ರತಿ ತಿಂಗಳ 20ನೇ ತಾರಿಖಿನಂದ ಬಸ್ ದಿನವನ್ನಾಗಿ ಆಚರಿಸಲಾಗುತ್ತಿದ್ದು ಆ ದಿನ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಬಳಸದೆ ಸರ್ಕಾರಿ ಸಾರಿಗೆಗಳಲ್ಲಿ ಪ್ರಯಾಣಿಸುವ ಮೂಲಕ ವಾಯುಮಾಲಿನ್ಯ ಹಾಗೂ ಸಂಚಾರ ದಟ್ಟನೆ ತಗ್ಗಿಸಲು ಸಹಕಾರ ನೀಡಬೇಕೆಂದರು. ವಾಕರಸಾಸಂಸ್ಥೆ ಕೇಂದ್ರ ಕಚೇರಿ ಹುಬ್ಬಳ್ಳಿಯ ಅಧ್ಯಕ್ಷರಾದ ಸದಾನಂದ ಡಂಗನವರ ಮಾತನಾಡಿ ಪ್ರಯಾಣಿಕರಿಗಾಗಿ ಸಂಸ್ಥೆಯು ಹಲವಾರು ಸೌಕರ್ಯಗಳನ್ನು ನೀಡಿದೆ, ವಿದ್ಯಾರ್ಥಿಗಳ, ಹಿರಿಯ ನಾಗರಿಕರ, ವಿಕಲಚೇತನರ, ಮಹಿಳಾ ಪ್ರಯಾಣಿಕರ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲಕ್ಕಾಗಿ ಗ್ರಾಮೀಣ ಭಾಗದಲ್ಲಿ ಮಿನಿ ಬಸ್ ಸಂಚಾರಕ್ಕೆ ಉತ್ತೇಜನ ನೀಡಲಾಗುತ್ತಿದೆ ಪ್ರತಿ ತಿಂಗಳ 2 ನೇ ತಾರಿಖೀನಂದು ನಮ್ಮ ಬಸ್ ನಮ್ಮ ನಿಲ್ದಾಣ ಎಂಬ ಸ್ವಚ್ಚತಾ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕ್ರಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಸಂಜು ಮಿಶಾಳೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಸದಸ್ಯ ಸುರೇಶ ತಳವಾರ, ಸಲಹಾ ಸಮೀತಿ ನಿರ್ದೇಶಕ ಪ್ರಸನ್ನ ಗಾವಡಾ, ಮುಖ್ಯ ಕಾಮಗಾರಿ ಅಭಿಯಂತರ ಟಿಕೆ ಪಾಲನೇತ್ರನಾಯಕ, ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ ಬಾಗಬಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಕರರಸಾ ಸಂಸ್ಥೆ ಹುಬ್ಬಳ್ಳಿ ವ್ಯವಸ್ಥಾಪಕ ಪಾಂಡುರಂಗ ನಾಯಕ ಸ್ವಾಗತಿಸಿದರು, ಶಿವಪ್ರಸಾದ ನಿರೂಪಿಸಿದರು. ಘಟಕ ವ್ಯವಸ್ಥಾಪಕ ಎಲ್.ಎಚ್.ರಾಥೋಡ ವಂದಿಸಿದರು.
ಕಾರ್ಯಕ್ರಮದಲ್ಲಿ :- ಕಂದಾಯ ಇಲಾಖೆ ಹಾಗೂ ಪುರಸಭೆ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ, ಆಶ್ರಯ ಯೋಜನೆಯಡಿ ಹಕ್ಕುಪತ್ರ ಹಾಗೂ ಕ್ರೀಡಾ ಇಲಾಖೆಯ ಯುವ ಸಬಲೀಕರಣ ಯೋಜನೆಯಡಿ ಯುವಕ ಮಂಡಳಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಸಚಿವ ದೇಶಪಾಂಡೆ ವಿತರಿಸಿದರು.
Leave a Comment